ಗುಂಟೂರು (ಆಂಧ್ರಪ್ರದೇಶ): ಆ ಬಡ ತಾಯಿ ತನ್ನ ಮಗನನ್ನು ದೊಡ್ಡ ಅಧಿಕಾರಿಯನ್ನಾಗಿ ಮಾಡಬೇಕೆಂದು ಕನಸು ಕಂಡು ಮೈ ಮುರಿದು ದುಡಿದು ಶಿಕ್ಷಣ ಕೊಡಿಸುತ್ತಿದ್ದಳು. ಆದರೆ, ಮಂದಬುದ್ಧಿಯವನಾಗಿದ್ದ ಮಗ ಶಿಕ್ಷಣದಲ್ಲಿ ಸ್ವಲ್ಪ ಹಿಂದಿದ್ದ. ತಿದ್ದಿ ಬುದ್ಧಿ ಹೇಳಬೇಕಾದ ಶಿಕ್ಷಕ ಮಾತ್ರ ಆ ಬಾಲಕನನ್ನು ದಿನವೂ ಅವಮಾನಿಸುತ್ತಿದ್ದರಂತೆ. ಇದು ಹುಡುಗನ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ. ತಾಯಿಯ ಅಗಾಧ ಕನಸು ನುಚ್ಚು ನೂರಾಗಿದೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೈಲ್ಪೇಟೆಯ ಅಂಜಮ್ಮ ಎಂಬುವರ ಪುತ್ರ 9ನೇ ತರಗತಿ ಓದುತ್ತಿದ್ದ ಆಕಾಶ್ ಮೃತಪಟ್ಟ ವಿದ್ಯಾರ್ಥಿ. ಈತ ಕಲಿಕೆಯಲ್ಲಿ ಹಿಂದುಳಿದಿರುವುದೇ ಶಾಲೆಯ ಶಿಕ್ಷಕರಿಗೆ ಬೈಯ್ಯಲು ವಿಷಯವಾಗಿತ್ತು. ಶಾಲೆಗೆ ಬರುವ ಆಕಾಶ್ಗೆ ಆ ಶಿಕ್ಷಕ ನಿತ್ಯವೂ ಬೈಗುಳದಿಂದ ಮನಸ್ಸು ನೋಯಿಸುತ್ತಿದ್ದನಂತೆ. ಇದರಿಂದ ಆಕಾಶ್ ಮನನೊಂದಿದ್ದ. ಬಡತನ ಮತ್ತು ಉತ್ತಮ ಮಾರ್ಗದರ್ಶನ ಕೊರತೆ ಹುಡುಗ ಓದಿನಲ್ಲಿ ಹಿಂದುಳಿಯಲು ಕಾರಣವಾಗಿತ್ತು. ಇದು ಶಿಕ್ಷಕನಿಗೆ ಅರ್ಥವಾಗಿರಲಿಲ್ಲ.
ಊಟದ ತಟ್ಟೆ ಕಸಿದ ಶಿಕ್ಷಕ: ಕೆಲ ದಿನಗಳ ಹಿಂದೆ ಸ್ನೇಹಿತರೊಂದಿಗೆ ಆಕಾಶ್ ಊಟಕ್ಕೆ ಕುಳಿತಿದ್ದಾಗ ಅಲ್ಲಿಗೆ ಬಂದ ಶಿಕ್ಷಕ, ಊಟದ ತಟ್ಟೆ ಕಿತ್ತುಕೊಂಡು "ಅನಕ್ಷರಸ್ಥರಿಗೆ ಊಟ ಏಕೆ ಬೇಕು?" ಎಂದು ಎಲ್ಲರೆದುರು ಅವಮಾನಿಸಿದ್ದಾನೆ. ಇದರಿಂದ ನೊಂದ ಆಕಾಶ್ ವಿಚಾರವನ್ನು ತಾಯಿಗೆ ತಿಳಿಸಿದ್ದಾನೆ. ತಾಯಿ ಸಾಂತ್ವನದ ಮಾತುಗಳನ್ನು ಹೇಳಿ ಮತ್ತೆ ಶಾಲೆಗೆ ಕಳುಹಿಸಿದ್ದರು. ಅದಾದ ಬಳಿಕವೂ ಆಕಾಶ್ನ ಬಗೆಗಿದ್ದ ಶಿಕ್ಷಕನ ಅಸಡ್ಡೆ ಮುಂದುವರಿಯಿತು. ದಿನವೂ ಶಾಲೆಯಲ್ಲಿ ನಿಂದಿತನಾಗುತ್ತಿದ್ದ ಆತ ತಾಯಿಗೆ ದಿನವೂ ಈ ಬಗ್ಗೆ ವಿಚಾರ ತಿಳಿಸುತ್ತಿದ್ದ.
ಶಾಲೆ ಬಿಟ್ಟು ಕೆಲಸಕ್ಕೆ: ಶಿಕ್ಷಕನ ಬೈಗುಳಕ್ಕೆ ನೊಂದ ಆಕಾಶ್ ಕಳೆದ 2 ದಿನಗಳಿಂದ ಶಾಲೆಗೆ ಹೋಗುವುದನ್ನು ನಿಲ್ಲಿಸಿ, ತಾಯಿಯ ಜೊತೆ ಕೆಲಸಕ್ಕೆ ಹೋಗುತ್ತಿದ್ದ. ನಿನ್ನೆ ಮನೆಗೆ ಕೀಲಿಯನ್ನು ಹಾಕಿ ಹೋಗಿದ್ದ ಕಾರಣ ಅವನ ಅಣ್ಣನಿಗೆ ತಲುಪಿಸಲು ಮನೆಗೆ ವಾಪಸ್ ಬಂದಿದ್ದಾನೆ. ಈ ವೇಳೆ ಆಕಾಶ್ನ ಅಣ್ಣ ತರಕಾರಿ ತರಲು ಮನೆಯಿಂದ ಹೊರ ಹೋದಾಗ ಆತ ತಾಯಿಯ ಸೇರಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಾಪಸ್ ಬಂದು ಸಹೋದರ ನೋಡಿದಾಗ ಆಕಾಶ್ ಮೃತದೇಹ ನೇತಾಡುತ್ತಿತ್ತು. ತಕ್ಷಣವೇ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಅಷ್ಟೊತ್ತಿಗಾಗಲೇ ಆಕಾಶ್ ಉಸಿರು ನಿಲ್ಲಿಸಿದ್ದ. ಶಿಕ್ಷಕನ ನಿಂದನೆಯಿಂದಾಗಿ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಾಯಿ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ವಿಮಾನದ ಶೌಚಾಲಯ ಬಳಿ ಸಿಕ್ಕ ಟಿಶ್ಯೂ ಪೇಪರ್ನಲ್ಲಿ ಬಾಂಬ್ ಬೆದರಿಕೆ ಸಂದೇಶ.. ಶಂಕಿತರು ವಶಕ್ಕೆ