ಚಂಡಿಗಢ(ಪಂಜಾಬ್): ಭಾರತದಲ್ಲಿ ನಿಷೇಧಕ್ಕೊಳಗಾಗಿರುವ ಸಿಖ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಪ್ರತ್ಯೇಕತಾವಾದಿ ಸಂಘಟನೆಯ ಮೂವರು ಸದಸ್ಯರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ರೆಫರೆಂಡಮ್-2020 ಎಂಬ ಹೆಸರಿನಲ್ಲಿ ಕರಪತ್ರಗಳನ್ನು ಹಂಚುತ್ತಿದ್ದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ.
ಲುಧಿಯಾನಾ ಜಿಲ್ಲೆಯ ಖನ್ನಾ ನಗರದ ಬಳಿಯ ರಾಮಪುರ ಗ್ರಾಮದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಬೆಂಬಲ ನೀಡುವ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಕರಪತ್ರಗಳನ್ನು ಜಪ್ತಿ ಮಾಡಲಾಗಿದೆ.

ಎಸ್ಎಫ್ಜೆ ಅನ್ನು 2019ರ ಜುಲೈನಲ್ಲಿ ಯುಎಪಿ ಕಾಯ್ದೆಯಡಿಯಲ್ಲಿ ನಿಷೇಧ ಮಾಡಲಾಯಿತು. ಸಿಖ್ ಪ್ರತ್ಯೇಕತವಾದ ಪರವಾದ ಜನಾಭಿಪ್ರಾಯ ರೂಪಿಸುತ್ತಿದ್ದ ಮತ್ತು ಪಂಜಾಬ್ ರಾಜ್ಯದಲ್ಲಿ ಅಶಾಂತಿ ಮತ್ತು ಕೋಮುಗಲಭೆಗೆ ಕಾರಣವಾಗುತ್ತಿದ್ದ ಆರೋಪದ ಮೇಲೆ ಈ ಸಂಘಟನೆಯನ್ನು ನಿಷೇಧಿಸಲಾಗಿತ್ತು.
ಈಗ ಬಂಧಿತರನ್ನು ಖನ್ನಾದ ರಾಂಪುರದ ಗುರ್ವಿಂದರ್ ಸಿಂಗ್, ಮೊರಿಂಡಾದ ರೂಪಾರ್ ಬಳಿಯ ಜಗ್ವಿಂದರ್ ಸಿಂಗ್ ಮತ್ತು ಸುಖದೇವ್ ಸಿಂಗ್ ಎಂದು ಗುರುತಿಸಲಾಗಿದೆ. ಇದರ ಜೊತೆಗೆ ಅಮೆರಿಕ ಮೂಲದ ಗುರುಪತ್ವಂತ್ ಸಿಂಗ್ ಪನ್ನು, ಹರಪ್ರೀತ್ ಸಿಂಗ್, ಬಿಕ್ರಮ್ಜೀತ್ ಸಿಂಗ್ ಮತ್ತು ಗುರುಸಹೈ ಮಖು ಹಾಗೂ ಖನ್ನಾದ ಜಗಜೀತ್ ಸಿಂಗ್ ಮಂಗತ್ ವಿರುದ್ಧ ದೂರು ದಾಖಲಾಗಿದೆ.

ದಾಳಿಯ ವೇಳೆ ಒಂದು ಕ್ಯಾನನ್ ಪ್ರಿಂಟರ್, ಸ್ಪ್ರೇ ಪಂಪ್ ಮತ್ತು ಸ್ಪ್ರೇ ಬಾಟಲಿ, ಒಂದು ಲ್ಯಾಪ್ಟಾಪ್, ಮೂರು ಮೊಬೈಲ್ ಫೋನ್ಗಳು ಮತ್ತು ಒಂದು ಹೋಂಡಾ ಸಿಟಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ತನಿಖೆಯ ಸಮಯದಲ್ಲಿ, ಆರೋಪಿ ಗುರ್ವಿಂದರ್ ಸಿಂಗ್ ಅಮೆರಿಕದಲ್ಲಿದ್ದು ಯೂಟ್ಯೂಬ್ ಚಾನೆಲ್ ಮೂಲಕ ಪ್ರತ್ಯೇಕವಾದಿ ವಿಚಾರಗಳನ್ನು ಹಂಚುತ್ತಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಇದರ ಜೊತೆಗೆ ಭಾರತದಲ್ಲಿ ಕರಪತ್ರಗಳನ್ನ ಹಂಚಲು ಕೂಡಾ ಬೆಂಬಲ ನೀಡುತ್ತಿರುವುದಾಗಿ ತಿಳಿದುಬಂದಿದೆ.
ಈಗ ಆರೋಪಿಗಳ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 124ಎ, 153ಎ, 153ಬಿ ಮತ್ತು 120ಬಿ ಮತ್ತು ಯುಎಪಿ ಕಾಯ್ದೆಯ ಸೆಕ್ಷನ್ 17, 18, 20, 40ರ ಅಡಿಯಲ್ಲಿ ಎಸ್ಎಎಸ್ ನಗರ (SAS) ಮತ್ತು ಎಸ್ಎಸ್ಒಸಿ (SSOC) ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಒಂದೇ ದಿನ ಕುಲ್ಗಾಂನಲ್ಲಿ ಎರಡು ಕಡೆ ಉಗ್ರರ ಅಟ್ಟಹಾಸ: ಕಾನ್ಸ್ಟೇಬಲ್, ಕಾರ್ಮಿಕ ಸಾವು