ನವದೆಹಲಿ : ಶ್ರೀಕೃಷ್ಣ ಜನ್ಮಭೂಮಿಯಾದ ಉತ್ತರಪ್ರದೇಶದ ಮಥುರಾದಲ್ಲಿ ರೈಲ್ವೆ ಇಲಾಖೆ ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಆಗಸ್ಟ್ 16 ರಂದು ವಿಚಾರಣೆ ನಡೆಸಲು ಒಪ್ಪಿದೆ. ಹಿರಿಯ ವಕೀಲ ಪ್ರಶಾಂತೋ ಚಂದ್ರ ಸೇನ್ ಅವರು ಅರ್ಜಿಯ ಕುರಿತಾಗಿ ಕೋರ್ಟ್ ಮುಂದೆ ಪ್ರಸ್ತಾಪಿಸಿದಾಗ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಅರ್ಜಿದಾರರಿಗೆ ಆಗಸ್ಟ್ 16 ರಂದು ವಿಚಾರಣೆ ನಡೆಸುವುದಾಗಿ ಭರವಸೆ ನೀಡಿತು.
ಆಗಸ್ಟ್ 9 ರಿಂದ ರೈಲ್ವೆ ಅಧಿಕಾರಿಗಳು ಜನರು ವಾಸಿಸುತ್ತಿರುವ ಪ್ರದೇಶದಲ್ಲಿ ಒತ್ತುವರಿ ಕಾರ್ಯ ಆರಂಭಿಸಿದ್ದಾರೆ. 1800 ರ ದಶಕದಿಂದಲೂ ಜನರು ಅಲ್ಲಿ ವಾಸಿಸುತ್ತಿದ್ದಾರೆ. ಇದೀಗ ರೈಲ್ವೆ ಸರ್ಕಾರಿ ಜಾಗ ಎಂದು ಗುರುತಿಸಿ ಜನರನ್ನು ಒಕ್ಕೆಲೆಬ್ಬಿಸುತ್ತಿದ್ದಾರೆ ಎಂದು ಹಿರಿಯ ವಕೀಲ ಸೇನ್ ಪೀಠಕ್ಕೆ ಮಾಹಿತಿ ನೀಡಿದರು.
ಅರ್ಜಿಯಲ್ಲಿ ಏನಿದೆ?: ಮಥುರಾ ರೈಲ್ವೆ ಅಧಿಕಾರಿಗಳು ಜನಪ್ರದೇಶವನ್ನು ರೈಲ್ವೆಗೆ ಸೇರಿದ ಜಾಗ ಎಂದು ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಇದರ ವಿರುದ್ಧ ಸಿವಿಲ್ ಮೊಕದ್ದಮೆ ದಾಖಲಿಸಿ, ರೈಲ್ವೆ ಪ್ರಾಧಿಕಾರದ ವಿರುದ್ಧ ಶಾಶ್ವತ ತಡೆಯಾಜ್ಞೆಯನ್ನು ಕೋರಲಾಗಿದೆ. ಆದಾಗ್ಯೂ ಆಗಸ್ಟ್ 9 ರಿಂದ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಮರುದಿನ ಆಗಸ್ಟ್ 10 ರಂದು ಸಿವಿಲ್ ಕೋರ್ಟ್ ಈ ಬಗ್ಗೆ ಪ್ರಶ್ನಿಸಿದ್ದು, ರೈಲ್ವೆ ಪರ ವಕೀಲರು ತಮ್ಮ ಬಳಿ ತೆರವು ಕಾರ್ಯಾಚರಣೆಗೆ ಸರ್ಕಾರದಿಂದ ಯಾವುದೇ ಸೂಚನೆ ಇಲ್ಲ. ಆದೇಶದೊಂದಿಗೆ ಕಾರ್ಯಾಚರಣೆ ನಡೆಸುವುದಾಗಿ ಸಿವಿಲ್ ನ್ಯಾಯಾಲಯಕ್ಕೆ ಹೇಳಿದ್ದಾರೆ ಎಂದು ಅರ್ಜಿದಾರರು ಪೀಠಕ್ಕೆ ತಿಳಿಸಿದರು.
ಈ ಮಧ್ಯೆ ವಕೀಲರೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರ್ ಕೌನ್ಸಿಲ್ ಅಂಗೀಕರಿಸಿದ ನಿರ್ಣಯದ ಪ್ರಕಾರ ಅಲಹಾಬಾದ್ನಲ್ಲಿನ ಎಲ್ಲಾ ನ್ಯಾಯಾಲಯದ ಕಲಾಪಗಳನ್ನು ಅಮಾನತುಗೊಳಿಸಲಾಗಿದೆ. ಸಿವಿಲ್ ಕೋರ್ಟ್ ಮತ್ತು ಹೈಕೋರ್ಟ್ಗೆ ಇದರ ಅರ್ಜಿ ಸಲ್ಲಿಸಲಾಗಿದ್ದರೂ ವಿಚಾರಣೆ ನಡೆಯದ ಕಾರಣ, ರೈಲ್ವೆ ಪ್ರಾಧಿಕಾರ ಇದರ ಲಾಭ ಪಡೆದು ಕಾರ್ಯಾಚರಣೆ ಮುಂದುವರಿಸಿದೆ ಎಂದು ಆರೋಪಿಸಿದರು.
ಸಿವಿಲ್ ಕೋರ್ಟ್ ಮತ್ತು ಹೈಕೋರ್ಟ್ನಲ್ಲಿ ಈ ಕುರಿತು ದೂರು ಸಲ್ಲಿಸಲು ಪ್ರಯತ್ನಿಸಿದಾಗ್ಯೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಅದನ್ನು ಸುಪ್ರೀಂಕೋರ್ಟ್ ಮುಂದೆ ಪ್ರಸ್ತಾಪಿಸಲಾಗಿದೆ. ಅರ್ಜಿಯ ತುರ್ತು ವಿಚಾರಣೆ ಕೈಗೊಳ್ಳಬೇಕು. 1800 ರ ದಶಕದಿಂದ ಅಲ್ಲಿ ವಾಸಿಸುತ್ತಿರುವ ಜನರಿಗೆ ನ್ಯಾಯ ಕೊಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ: Independence Day: ಪ್ರತಿಯೊಬ್ಬ ಭಾರತೀಯನಿಗೂ ಸಮಾನ ಅವಕಾಶ, ಹಕ್ಕು, ಕರ್ತವ್ಯಗಳಿವೆ: ರಾಷ್ಟ್ರಪತಿ ದ್ರೌಪದಿ ಮುರ್ಮು