ಇಡುಕ್ಕಿ: ಕಳೆದ ಮೂರು ದಿನಗಳಿಂದ ಕೇರಳದ ಇಡುಕ್ಕಿ ಜಿಲ್ಲೆಯ ಪನ್ನಿಯಾರ್ ಪ್ರದೇಶದ ಶಾಂತನ್ಪಾರಾ ನಿವಾಸಿಗಳಿಗೆ ಪಡಿತರ ಪೂರೈಕೆ ಸಾಧ್ಯವಾಗುತ್ತಿಲ್ಲ. ಕಾರಣ, ಅಧಿಕಾರಿಗಳು ವಿಧಿಸಿದ ನಿರ್ಬಂಧವಲ್ಲ, ಬದಲಾಗಿ 'ಅಕ್ಕಿ ಪ್ರಿಯ ಆನೆ'.
ಹೌದು, ಈ ಆನೆಗೆ ಅಕ್ಕಿ ಅಂದ್ರೆ ಪಂಚಪ್ರಾಣ. ಈ ಕಾರಣಕ್ಕೆ ಆನೆಯು ತನ್ನ ನೆಚ್ಚಿನ ಧಾನ್ಯ ಹುಡುಕುತ್ತಾ ಈ ಪ್ರದೇಶದಲ್ಲಿ ಪದೇ ಪದೇ ಓಡಾಡುತ್ತಿದ್ದು ಜನರೇ ಅಕ್ಕಿ ಬಳಸಲು ಹಿಂಜರಿಯುವ ಪರಿಸ್ಥಿತಿ ಎದುರಾಗಿದೆ.
'ಅರಿಕೊಂಬನ್' ಎಂಬ ಅಡ್ಡಹೆಸರಿನ ಈ ಆನೆಯು ಪಡಿತರ ಅಂಗಡಿಗಳನ್ನು ಪುಡಿಗಟ್ಟುತ್ತಿದೆ. ಹಾಗೆಯೇ ತಿನ್ನಲು ಅಕ್ಕಿ ಚೀಲಗಳನ್ನು ಹೊರತೆಗೆದು ತಿಂದು ಹಾಕುತ್ತಿದೆ ಎಂದು ವರದಿಯಾಗಿದೆ. ಅರಿಕೊಂಬನ್ ಕೆಲವೊಮ್ಮೆ ಅಕ್ಕಿಯ ಹುಡುಕಾಟದಲ್ಲಿ ಮನೆಗಳನ್ನೂ ಧ್ವಂಸ ಮಾಡಿದೆ. ಆನೆ ಈ ಪ್ರದೇಶವನ್ನು ಬಿಟ್ಟು ಬೇರೆಡೆಗೆ ಹೋಗಲು ಮುಂದಾಗುತ್ತಿಲ್ಲ. ಅಕ್ಕಿ ಹುಡುಕಿಕೊಂಡು ರಾತ್ರಿ ವೇಳೆ ಸಿಕ್ಕ ಸಿಕ್ಕಲ್ಲೆಲ್ಲಾ ತಿರುಗಾಡುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಾಹಿತಿ ಪ್ರಕಾರ, ಕಳೆದ ಮೂರು ದಿನಗಳಲ್ಲಿ ಅರಿಕೊಂಬನ್ ಈ ಪ್ರದೇಶದಲ್ಲಿ ಮೂರು ಪಡಿತರ ಅಂಗಡಿಗಳ ಮೇಲೆ ದಾಳಿ ಮಾಡಿ ಮೂರು ದೊಡ್ಡ ಅಕ್ಕಿ ಚೀಲಗಳನ್ನು ಕಬಳಿಸಿದೆಯಂತೆ.
ಈ ಆನೆ ನೀಡುವ ತೊಂದರೆಯಿಂದ ಪನ್ನಿಯಾರ್ ಎಸ್ಟೇಟ್ನಲ್ಲಿ ಕಾರ್ಮಿಕರಿಗೆ ಪಡಿತರ ಪೂರೈಕೆ ಸ್ಥಗಿತಗೊಂಡಿದೆ.