ಬೆಂಗಳೂರು: ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತವು ದೇಶದ ಅತಿದೊಡ್ಡ ರೈಲು ಅಪಘಾತಗಳಲ್ಲಿ ಒಂದಾಗಿದೆ. ಇದೇ ಕಾರಣಕ್ಕೆ ಈ ಘಟನೆ ಬಗ್ಗೆಯೂ ರಾಜಕೀಯ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ತೇಜಸ್ವಿ ಸೂರ್ಯ ಸೇರಿದಂತೆ ಕರ್ನಾಟಕದ ನಾಲ್ವರು ಬಿಜೆಪಿ ಸಂಸದರು ಶುಕ್ರವಾರ Odisha rail accident ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.
ಈ ಹಿಂದೆ ಜೂನ್ 5 ರಂದು ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಮೋದಿ ಸರ್ಕಾರದ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ಪತ್ರ ಬರೆದಿರುವ ಬಿಜೆಪಿ ಸಂಸದರಲ್ಲಿ ತೇಜಸ್ವಿ ಸೂರ್ಯ, ಪಿಸಿ ಮೋಹನ್, ಎಸ್ ಮುನಿಸ್ವಾಮಿ ಮತ್ತು ಸದಾನಂದ ಗೌಡ ಸೇರಿದ್ದಾರೆ.
ಪತ್ರದಲ್ಲಿ ಕಡಿಮೆ ಸತ್ಯ, ಹೆಚ್ಚು ವಾಕ್ಚಾತುರ್ಯ ಎಂದ ಬಿಜೆಪಿ ಸಂಸದ: ಖರ್ಗೆ ಅವರು ಪ್ರಧಾನಿ ಮೋದಿಗೆ ಬರೆದ ಪತ್ರವನ್ನು ಬಿಜೆಪಿ ಸಂಸದರು ತೀವ್ರವಾಗಿ ಟೀಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ನೀವು ಬರೆದಿರುವ ಪತ್ರಕ್ಕೆ ಪ್ರತಿಕ್ರಿಯೆಯಾಗಿ ನಿಮ್ಮ ಪತ್ರದಲ್ಲಿ ರಾಜಕೀಯ ವಾಕ್ಚಾತುರ್ಯ ಹೆಚ್ಚಿದೆ, ನೀವು ಎತ್ತಿರುವ ಪ್ರಶ್ನೆಗಳಲ್ಲಿ ವಾಸ್ತವಾಂಶದ ಕೊರತೆ ಇರುವುದು ಕಂಡುಕೊಂಡಿದ್ದೇವೆ. ಮಾಜಿ ರೈಲ್ವೇ ಸಚಿವರಾಗಿ, ಪರಿಸ್ಥಿತಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆಯು ವಿವೇಚನೆ ಮತ್ತು ಆಳವಾದ ತಿಳಿವಳಿಕೆಯಿಂದ ತುಂಬಿರುತ್ತದೆ ಎಂದು ನಿರೀಕ್ಷಿಸಬಹುದಿತ್ತು. ಆದರೆ ನಿಮ್ಮ ಪತ್ರವು ವಾಸ್ತವಕ್ಕೆ ದೂರವಾಗಿತ್ತು. ಅದಕ್ಕಾಗಿ ನಾವು ನಿಮಗೆ ವಾಸ್ತವವನ್ನು ತಿಳಿಸಬೇಕಿದೆ ಎಂದು ಬಿಜೆಪಿಯ ಸಂಸದರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರೈಲ್ವೆಯಲ್ಲಿ ನೇಮಕಾತಿಗಳ ಕೊರತೆ ತಿರಸ್ಕರಿಸಿದ ಸಂಸದರು: ಮೊದಲನೆಯದಾಗಿ, ರೈಲ್ವೆಯಲ್ಲಿ ನಡೆಯುತ್ತಿರುವ ನೇಮಕಾತಿಯ ಬಗ್ಗೆ ನಿಮಗೆ ಹೇಳಬಯಸುತ್ತೇವೆ. ಕಳೆದ ಒಂಬತ್ತು ವರ್ಷಗಳಲ್ಲಿ 4.58 ಲಕ್ಷ ನೇಮಕಾತಿಗಳನ್ನು ರೈಲ್ವೆಯಲ್ಲಿ ಮಾಡಲಾಗಿದೆ. ಪ್ರಸ್ತುತ ಸುಮಾರು 1.52 ಲಕ್ಷ ನೇಮಕಾತಿ ಪ್ರಕ್ರಿಯೆಯು ನಡೆಯುತ್ತಿದೆ.
ಹೀಗಾಗಿ 10 ವರ್ಷಗಳಲ್ಲಿ ನಾವು 6.1 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ನೇಮಿಸಲಿದ್ದೇವೆ. ಇದು ಯುಪಿಎ ನೇಮಕ ಮಾಡಿದ 4.11 ಲಕ್ಷ ಅಭ್ಯರ್ಥಿಗಳಿಗಿಂತ ಸುಮಾರು ಶೇ 50ಕ್ಕೂ ಹೆಚ್ಚು. ಅಲ್ಲದೇ 5,518 ಹೊಸ ಸಹಾಯಕ ಲೋಕೋ ಪೈಲಟ್ಗಳನ್ನು ನೇಮಿಸಲಾಗಿದ್ದು, ಈ ವಲಯವನ್ನು ನಿರ್ಲಕ್ಷಿಸುವ ನಿಮ್ಮ ಆರೋಪಗಳನ್ನು ಇದು ಅಲ್ಲಗಳೆಯುತ್ತದೆ ಎಂದು ಬರೆದಿದ್ದಾರೆ.
ವಾಟ್ಸ್ಆ್ಯಪ್ ವಿಶ್ವವಿದ್ಯಾಲಯದ ವಿಸಿ: ನಿಮ್ಮ ಪತ್ರದಲ್ಲಿ ಹೇಳಿರುವಂತೆ 2023ರ ಫೆಬ್ರುವರಿಯಲ್ಲಿ ಮೈಸೂರಿನಲ್ಲಿ ಯಾವುದೇ ರೈಲು ಡಿಕ್ಕಿಯಾಗಿಲ್ಲ ಎಂಬುದು ವಾಸ್ತವ. ವಾಟ್ಸ್ಆ್ಯಪ್ ಯೂನಿವರ್ಸಿಟಿಯಿಂದ ಪಡೆದ ಸತ್ಯಗಳ ಆಧಾರದ ಮೇಲೆ ಪ್ರಧಾನಿಗೆ ಪತ್ರ ಬರೆಯುವುದು ನಿಮ್ಮಂಥ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕನಿಗೆ ಸರಿಹೊಂದುವುದಿಲ್ಲ. ಬಹುಶಃ ವಾಟ್ಸ್ಆ್ಯಪ್ ಯೂನಿವರ್ಸಿಟಿಯ ಉಪಕುಲಪತಿಯಾಗಿ, ನೀವು ನಕಲಿ ಸುದ್ದಿಗಳನ್ನು ಸತ್ಯವೆಂದು ಪ್ರತಿಪಾದಿಸಲು ಒತ್ತಾಯಿಸಲ್ಪಟ್ಟಿದ್ದೀರಿ ಎಂದು ಕಾಣುತ್ತದೆ ಅಂತಾ ಸಂಸದರ ಪತ್ರದ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ನೀವು ರೈಲ್ವೇ ಸಚಿವಾಲಯದ ಜವಾಬ್ದಾರಿಯನ್ನು ನಿರ್ವಹಿಸಿದ್ದೀರಿ ಮತ್ತು ರೈಲ್ವೆ ಸುರಕ್ಷತಾ ಆಯುಕ್ತರು ಸ್ವತಂತ್ರ ಮತ್ತು ಶಾಸನಬದ್ಧ ಅಧಿಕಾರ ಎಂದು ನೀವು ತಿಳಿದಿರಬೇಕು, ಇತ್ತೀಚೆಗೆ 2022 ರಲ್ಲಿ CRS ಹುದ್ದೆಯನ್ನು ಉನ್ನತ ಮಟ್ಟಕ್ಕೆ ಅಪ್ಗ್ರೇಡ್ ಮಾಡುವ ಮೂಲಕ ಆಯೋಗವನ್ನು ಇನ್ನಷ್ಟು ಬಲಪಡಿಸಲಾಗಿದೆ ಎಂದು ಬರೆದಿದ್ದಾರೆ.
ಪ್ರತಿ ವರ್ಷ ರೈಲ್ವೇ ಬಜೆಟ್ ಕಡಿತಗೊಳಿಸಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಬಿಜೆಪಿ ಸಂಸದರು, ಒಂಬತ್ತು ವರ್ಷಗಳ ನಮ್ಮ ಪ್ರಯತ್ನವು ರೈಲ್ವೆಗೆ ಹೊಸ ಬಲವನ್ನು ನೀಡಿದೆ. ವಿದ್ಯುದ್ದೀಕರಣದಲ್ಲಿ ದಾಖಲೆಯ ಪ್ರಗತಿ ಸಾಧಿಸಲಾಗಿದೆ. ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಗಿದೆ ಮತ್ತು ಪ್ರಯಾಣದ ಅನುಭವವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಆಧುನಿಕ ಸೌಲಭ್ಯಗಳೊಂದಿಗೆ ಸುಮಾರು 1,275 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಓದಿ: Odisha Rail Mishap Video: ಒಡಿಶಾ ಭೀಕರ ರೈಲು ದುರಂತಕ್ಕೂ ಮುನ್ನ ಸೆರೆಯಾದ ವಿಡಿಯೋ