ಹರಿದ್ವಾರ : ರಾಮಮಂದಿರ ಟ್ರಸ್ಟ್ ಮೇಲಿರುವ ಅಕ್ರಮ ಭೂ ವ್ಯವಹಾರದ ಆರೋಪದ ಬಗ್ಗೆ ನಿರ್ವಾಣಿ ಅನಿ ಅಖಾರದ ಮಹಂತ್ ಧರಂ ದಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಬೇಜವಾಬ್ದಾರಿಯುತ ಮನುಷ್ಯ ಎಂದು ಹೇಳುವ ಮೂಲಕ ಅವರನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಿದ್ದಾರೆ.
ಭ್ರಷ್ಟ ಸದಸ್ಯರನ್ನು ತೆಗೆದು ಹಾಕುವ ಮೂಲಕ ವಿಶ್ವಾಸವನ್ನು ಪುನಃ ರಚಿಸುವಂತೆ ಧರಂದಾಸ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಒತ್ತಾಯಿಸಿದ್ದಾರೆ. ಜನರು ರಾಮ ದೇವಾಲಯದ ನಿರ್ಮಾಣಕ್ಕಾಗಿ ಹಣವನ್ನು ದೇಣಿಗೆ ನೀಡಿದ್ದಾರೆ ಹೊರತು ಅಕ್ರಮ ಭೂಮಿ ಖರೀದಿಸಿ ವ್ಯಾಪಾರ ಮಾಡಲು ಅಲ್ಲ ಎಂದು ಹೇಳಿದರು.
ರಾಮ ಮಂದಿರ ಟ್ರಸ್ಟ್ ಭೂಮಿಯನ್ನು ಖರೀದಿಸುವ ಮೂಲಕ ದೇಣಿಗೆ ಹಣವನ್ನು ವ್ಯರ್ಥ ಮಾಡುತ್ತಿದೆ. ಆದರೆ, ಇಡೀ ರಾಷ್ಟ್ರವು ಬಿಕ್ಕಟ್ಟಿನಲ್ಲಿದೆ. ಭಾರತದ ಕೋವಿಡ್ ಪರಿಸ್ಥಿತಿಗೆ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ನ ಭ್ರಷ್ಟ ಜನರು ಕಾರಣ. ಇವರಿಂದ ಇಡೀ ವ್ಯವಸ್ಥೆ ಹಾಳಾಗಿದೆ ಎಂದರು.
ಈ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಅವರು ಪ್ರಧಾನಿ ಮೋದಿ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ದೇವಾಲಯದ ಕೆಲಸವು 'ಸಾಧು'ಗಳಿಗೆ ಸೇರಿದ್ದುದರಿಂದ ಈ ಜನರನ್ನು ತೆಗೆದು ಹಾಕುವಂತೆ ಇಡೀ ಸಂತ ಸಮುದಾಯ ಸರ್ವಶಕ್ತನನ್ನು ಪ್ರಾರ್ಥಿಸುತ್ತದೆ ಎಂದರು.
ಇನ್ನು, ಕೆಲ ದಿನಗಳ ಹಿಂದೆ ಸಮಾಜವಾದಿ ಪಕ್ಷದ ಮುಖಂಡ ತೇಜ್ ನಾರಾಯಣ್ ಪಾಂಡೆ ಅವರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭೂ ವ್ಯವಹಾರದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿದ ನಂತರ ವಿವಾದ ಭುಗಿಲೆದ್ದಿತು.
ಬಳಿಕ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಪಾಂಡೆ, "ಈ ಭೂಮಿಯನ್ನು ಈ ಹಿಂದೆ 2 ಕೋಟಿ ರೂ. ಗೆ ರವಿ ಮೋಹನ್ ತಿವಾರಿ ಮತ್ತು ಸುಲ್ತಾನ್ ಅನ್ಸಾರಿ ಖರೀದಿಸಿದ್ದರು. ಆದರೆ, ಟ್ರಸ್ಟ್ ಮಾರ್ಚ್ 18 ರಂದು 18.5 ಕೋಟಿ ರೂ. ಗೆ ಭೂಮಿಯನ್ನು ಖರೀದಿಸಿತು" ಎಂದು ಹೇಳಿದರು. ಇದಾದ ನಂತರ ದೇಶಾದ್ಯಂತ ತೀವ್ರ ಚರ್ಚೆಗೆ ಗುರಿಯಾಗಿದೆ.