ಛಿಂದವಾಡಾ (ಮಧ್ಯ ಪ್ರದೇಶ) : ಜಿಲ್ಲೆಯ ರಾವಣವಾಡಾ ಠಾಣೆ ಪ್ರದೇಶದ ರಾವಣವಾಡಾ ಗ್ರಾಮವು ಪುರಾತನ ಧಾರ್ಮಿಕ ಐತಿಹ್ಯವನ್ನು ಹೊಂದಿದೆ. ಪುರಾತನ ನಂಬಿಕೆಯ ಪ್ರಕಾರ ತ್ರೇತಾಯುಗದಲ್ಲಿ ರಾವಣನು ಇಲ್ಲಿ ಭಗವಾನ್ ಶಿವನ ಪೂಜೆ ಮಾಡಿದ್ದನಂತೆ. ಅದೇ ಕಾರಣಕ್ಕೆ ಈ ಊರಿನ ಹೆಸರು ರಾವಣವಾಡಾ ಎಂದಾಗಿದೆ. ನೂರಾರು ವರ್ಷಗಳ ಹಿಂದೆ ಈ ಪ್ರದೇಶವು ಅತ್ಯಂತ ದಟ್ಟ ಕಾಡುಗಳಿಂದಾವೃತ್ತವಾಗಿತ್ತು. ಈ ಅರಣ್ಯದ ಮಧ್ಯದಲ್ಲಿ ರಾವಣನು ಶಿವನ ಪೂಜೆ ಮಾಡಿದ್ದ. ರಾವಣನ ಪೂಜೆಗೆ ಪ್ರಸನ್ನನಾದ ಭಗವಾನ್ ಶಿವ ಪ್ರತ್ಯಕ್ಷನಾಗಿ ಆಶೀರ್ವಾದ ಮಾಡಿದ್ದನಂತೆ.
ರಾವಣವಾಡಾ ಬಳಿ ಇವೆ ಮಹದೇವಪುರಿ ಮತ್ತು ವಿಷ್ಣುಪುರಿ: ರಾವಣವಾಡಕ್ಕೆ ಹೊಂದಿಕೊಂಡಂತೆ ವಿಷ್ಣುಪುರಿ ಮತ್ತು ಮಹದೇವಪುರಿ ಎಂಬ ಎರಡು ಗ್ರಾಮಗಳಿರುವುದರಿಂದ ಧಾರ್ಮಿಕ ಐತಿಹ್ಯದ ಬಗ್ಗೆ ಜನರ ನಂಬಿಕೆ ಮತ್ತೂ ಬಲವಾಗಿದೆ. ಒಂದೊಮ್ಮೆ ಇಲ್ಲಿ ವೆಸ್ಟರ್ನ್ ಕೋಲ್ ಫೀಲ್ಡ್ಸ್ ನ ಕಲ್ಲಿದ್ದಲು ಗಣಿಗಳಿದ್ದವು.
ಗ್ರಾಮದ ಆದಿವಾಸಿಗಳು ರಾವಣನನ್ನು ಆರಾಧ್ಯ ದೇವರೆಂದು ಪೂಜಿಸುತ್ತಾರೆ. ರಾವಣವಾಡದ ನಿವಾಸಿ ರಾಜೇಶ್ ಧುರ್ವೆ ಅವರು ತಮ್ಮ ಸ್ವಂತ ಜಮೀನಿನಲ್ಲಿಯೇ ರಾವಣ ದೇವನ ದೇವಾಲಯವಿದೆ ಎಂದು ಹೇಳುತ್ತಾರೆ. ರಾವಣನನ್ನು ಹಲವು ತಲೆಮಾರುಗಳಿಂದ ಇಲ್ಲಿ ಪೂಜಿಸಲಾಗುತ್ತಿದೆ.
ದಸರಾ ಮತ್ತು ದೀಪಾವಳಿಯಲ್ಲಿ ಜಾತ್ರೆ: ಆದಿವಾಸಿಗಳು ರಾವಣನನ್ನು ಆರಾಧ್ಯ ದೈವ ಎಂದು ಪರಿಗಣಿಸುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ. ಅದಕ್ಕಾಗಿಯೇ ದಸರಾ ಮತ್ತು ದೀಪಾವಳಿ ನಂತರ ಇಲ್ಲಿ ಜಾತ್ರೆ ನಡೆಯುತ್ತದೆ. ಈ ವೇಳೆ, ದೂರದೂರುಗಳಿಂದ ಬಂದು ಪೂಜೆ ಸಲ್ಲಿಸಿ ದೇವಸ್ಥಾನದಲ್ಲಿ ಕೋಳಿ, ಮೇಕೆ ಬಲಿ ಕೊಡುವ ಪದ್ಧತಿಯೂ ಇದೆ.
ದುಷ್ಟರ ಪ್ರತೀಕವಾದ ರಾವಣನ ಪ್ರತಿಕೃತಿಯನ್ನು ದಸರಾ ಸಂದರ್ಭದಲ್ಲಿ ಎಲ್ಲೆಡೆ ದಹಿಸಲಾಗುತ್ತದೆ. ಆದರೆ, ಬದಲಾದ ಕಾಲಕ್ಕೆ ತಕ್ಕಂತೆ ಬುಡಕಟ್ಟು ಸಮಾಜ ಇದನ್ನು ವಿರೋಧಿಸತೊಡಗಿದೆ. ಆದಿವಾಸಿಗಳು ರಾವಣನನ್ನು ತಮ್ಮ ಪೂರ್ವಜ ಎಂದು ನಂಬುತ್ತಾರೆ. ಆದ್ದರಿಂದ ಸಾಂಕೇತಿಕ ಪ್ರತಿಕೃತಿ ದಹನವನ್ನು ನಿಷೇಧಿಸಬೇಕು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕೊಪ್ಪಳದ ಅಂಜನಾದ್ರಿಯೇ ಹನುಮನ ಜನ್ಮಸ್ಥಳ.. ಇತಿಹಾಸ ತಜ್ಞ ಕೊಟ್ನೇಕಲ್ ಪುಸ್ತಕದಲ್ಲಿ ಉಲ್ಲೇಖ