ಬಹ್ರೈಚ್ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಈದ್ ಮಿಲಾದ್ ದಿನದಂದು ಭಾರಿ ದುರಂತ ಸಂಭವಿಸಿದೆ. ಬಹ್ರೈಚ್ ಜಿಲ್ಲೆಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಆರು ಜನರು ದುರ್ಮರಣ ಹೊಂದಿದ್ದಾರೆ. ಇನ್ನೂ ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಲ್ಲಿನ ಕೊತ್ವಾಲಿ ನಾನ್ಪಾರಾ ಪ್ರದೇಶದ ಮಾಶು ನಗರ ಗ್ರಾಮದಲ್ಲಿ ಈ ದುರ್ಘಟನೆ ಸಮಭವಿಸಿದೆ. ಇಂದು ಬೆಳಗಿನಜಾವ 4 ಗಂಟೆ ಸುಮಾರಿಗೆ ಈದ್ ಮಿಲಾದ್ ನಿಮಿತ್ತ ಗ್ರಾಮದಲ್ಲಿ ಬರವಾಫತ್ ಮೆರವಣಿಗೆ ಮಾಡಲಾಗುತ್ತಿತ್ತು. ನೂರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಮದಿಂದ ಮೆರವಣಿಗೆಗೆಂದು ಹೊರ ಬಂದ ತಕ್ಷಣವೇ ಹೈಟೆನ್ಷನ್ ತಗುಲಿದೆ. ಇದರಿಂದ ಮೂವರು ಮಕ್ಕಳು ಸೇರಿ ಆರು ಜನರು ಮೃತಪಟ್ಟಿದ್ದಾರೆ.

ಮೃತರನ್ನು ಅರ್ಫಾಕ್ (8), ಶಫೀಕ್ (14), ತಬ್ರೇಜ್ (16), ಇಲ್ಯಾಸ್ (18), ಅಶ್ರಫ್ ಅಲಿ (24) ಗುರುತಿಸಲಾಗಿದೆ. ಉಳಿದ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ವಿಷಯ ತಿಳಿಸಿದ ಪೊಲೀಸರು ಗ್ರಾಮಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಮೆರವಣಿಗೆ ವೇಳೆ ಗಾಡಿಗೆ ಹಾಕಿದ್ದ ಕಬ್ಬಿಣದ ರಾಡ್ಗೆ ಹೈಟೆನ್ಷನ್ ತಂತಿ ತಗುಲಿ ಈ ದುರಂತ ಜರುಗಿದೆ. ಅಲ್ಲದೇ, ಈ ಘಟನೆ ನಡೆದಾಗ ಜನರು ಬಚಾವ್ ಆಗಲು ಯತ್ನಿಸಿದ್ದರಿಂದ ಕಾಲ್ತುಳಿತದ ಪರಿಸ್ಥಿತಿ ಉಂಟಾಗಿತ್ತು ಎಂದು ತಿಳಿದು ಬಂದಿದೆ. ಇನ್ನು, ಘಟನೆಯಲ್ಲಿ ಮೃತರ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಮೇಕೆಗಳ ಕದ್ದ ಶಂಕೆ ಮೇಲೆ ಜಗಳ ಮಾಡಿದ ರೈತನಿಗೆ ಗುಂಡಿಕ್ಕಿ ಕೊಲೆ