ನವದೆಹಲಿ: ಮಣಿಪುರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಅಸ್ಸೋಂ ರೈಫಲ್ಸ್ (Assam Rifles) ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರು ಸಾವನ್ನಪ್ಪಿದ ನಂತರ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಪ್ರತಿಕ್ರಿಯೆ ನೀಡಿದ್ದು, ಇಂಥಹ ಘಟನೆಗಳು ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಮತ್ತು ಅಭಿವೃದ್ಧಿಗೆ ಅಡ್ಡಿ ಉಂಟು ಮಾಡುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಸ್ಸೋಂ ರೈಫಲ್ಸ್ ಸಿಬ್ಬಂದಿ ಮೇಲಿನ ಘೋರ ದಾಳಿಯನ್ನು ನಾವು ಖಂಡಿಸುತ್ತೇವೆ. ಈ ರೀತಿಯ ಘಟನೆಯು ಈಶಾನ್ಯ ರಾಜ್ಯಗಳ ಪ್ರದೇಶದ ಶಾಂತಿ ಮತ್ತು ಅಭಿವೃದ್ಧಿಗೆ ಅಡ್ಡಿ ಮಾಡುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಹಿಮಂತ ಬಿಸ್ವಾ ಶರ್ಮಾ ನವದೆಹಲಿಯಲ್ಲಿ ಹೇಳಿದ್ದಾರೆ.
ಅಸ್ಸೋಂನ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (Asian Development Bank-ADB) ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲು ಹಿಮಂತ ಬಿಸ್ವಾ ಶರ್ಮಾ ನವದದೆಹಲಿಗೆ ಬಂದಿದ್ದು, ಈ ವೇಳೆ ಉಗ್ರರ ದಾಳಿಯನ್ನು ಖಂಡಿಸಿದ್ದಾರೆ.
ಈಶಾನ್ಯ ರಾಜ್ಯಗಳ ಪ್ರದೇಶದ ಒಟ್ಟಾರೆ ಅಭಿವೃದ್ಧಿಗಾಗಿ ಈಶಾನ್ಯ ಕೈಗಾರಿಕಾ ಕಾರಿಡಾರ್ (Northeast Industrial Corridor) ಅನ್ನು ಸ್ಥಾಪಿಸಲು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ನಮಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದು, ಎಡಿಬಿ ನೆರವಿನೊಂದಿಗೆ ಅಸ್ಸೋಂನಲ್ಲಿ ಈಗಾಗಲೇ ಹಲವಾರು ಯೋಜನೆಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.
ನಾನು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಪ್ರತಿನಿಧಿಯೊಂದಿಗೆ ಪ್ರಾಥಮಿಕ ಚರ್ಚೆ ನಡೆಸಿದ್ದೇನೆ. ನಾವು ರಾಜ್ಯದಲ್ಲಿ ಕಾಮಗಾರಿಗಳನ್ನು ತ್ವರಿತಗೊಳಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದ್ದೇವೆ. ಲೋವರ್ ಕೊಪಿಲಿ ಹೈಡ್ರೊ ಪವರ್ ಪ್ರಾಜೆಕ್ಟ್ (Lower Kopili Hydro Power Project), ದರಂಗ್ನಲ್ಲಿ ಅಸ್ಸೋಂ ಸ್ಕಿಲ್ ಯೂನಿವರ್ಸಿಟಿ ಎಡಿಬಿಯಿಂದ ಧನಸಹಾಯ ಪಡೆಯುತ್ತಿರುವ ಪ್ರಮುಖ ಯೋಜನೆಗಳಾಗಿವೆ ಎಂದು ಹಿಮಂತ ಬಿಸ್ವಾ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: Gadchiroli encounter.. ಮಹಾರಾಷ್ಟ್ರದಲ್ಲಿ 26 ನಕ್ಸಲರ ಬೇಟೆಯಾಡಿದ ಪೊಲೀಸರು