ನವದೆಹಲಿ : ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಾಣಾವತ್ ದೆಹಲಿ ವಿಧಾನಸಭೆ ಶಾಂತಿ ಸಮಿತಿ ಮುಂದೆ ಇಂದು ಹಾಜರಾಗದೇ, ಕಾಲಾವಕಾಶ ವಿಸ್ತರಿಸಲು ಕೋರಿದ್ದಾರೆ.
ನಟಿ ಕಂಗನಾ ಅವರು ಇತ್ತೀಚೆಗೆ ಮಾಜಿ ಪ್ರಧಾನಮಂತ್ರಿ ದಿ.ಇಂದಿರಾಗಾಂಧಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ, ಈ ಬಗ್ಗೆ ವಿಚಾರಣೆ ನಡೆಸಲು ದೆಹಲಿ ವಿಧಾನಸಭೆ ಶಾಂತಿ ಸಮಿತಿಗೆ ದೂರು ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ನಟಿ ಕಂಗನಾಗೆ ಶಾಂತಿ ಮತ್ತು ಸೌಹಾರ್ದತಾ ಸಮಿತಿ ನೋಟಿಸ್ ಜಾರಿ ಮಾಡಿ ತಮ್ಮ ಹೇಳಿಕೆಗಳ ಬಗ್ಗೆ ಸ್ಪಷ್ಟೀಕರಣ ನೀಡಲು ಡಿ.6ರಂದು ಗಡುವು ನೀಡಿತ್ತು.
ಆದರೆ, ನಟಿ ಕಂಗನಾ ರಾಣಾವತ್ ವೈಯಕ್ತಿಕ ಕಾರಣದಿಂದಾಗಿ ಸಮಿತಿ ಮುಂದೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಕಾಲಾವಕಾಶ ವಿಸ್ತರಿಸಬೇಕು ಎಂದು ಕೋರಿದ್ದಾರೆ. ಇದನ್ನು ಸಮಿತಿ ಮಾನ್ಯ ಮಾಡಲಿದೆ. ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ರಾಘವ್ ಚಡ್ಡಾ ತಿಳಿಸಿದ್ದಾರೆ.