ಬಾರಾಸಾತ್: ಪಶ್ಚಿಮ ಬಂಗಾಳ ವಿಭಜನೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯಾವಾಗಲೂ ವಿರೋಧ ವ್ಯಕ್ತಪಡಿಸಿದ್ದಾರೆ. ಉತ್ತರ ಬಂಗಾಳ ಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಎಂ ಮಮತಾ ಪದೇ ಪದೆ ಶಾಂತಿಯ ಬಗ್ಗೆ ಮಾತುಗಳನ್ನೇ ಆಡಿದ್ದರು. ಅಲ್ಲದೇ ಈ ಭಾಗದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿಯ ಬಗ್ಗೆ ಹೇಳಿದ್ದರು.
ಆದರೆ, ಉತ್ತರ ಬಂಗಾಳಕ್ಕೆ ಸಿಎಂ ಮಮತಾ ಭೇಟಿ ನೀಡುವ ಮುನ್ನವೇ ರಾಜ್ಯವನ್ನು ಇಬ್ಭಾಗ ಮಾಡದಂತೆ ಆಗ್ರಹಿಸಿ ಜಲಪೈಗುರಿ ಜಿಲ್ಲೆಯ ದೋವಾರ್ಸ್ನ ಬಿನ್ನಗುರಿಯ ಶಂಕರ್ ಭಟ್ಟಾಚಾರ್ಯ ಎಂಬ 46 ವಯಸ್ಸಿನ ವ್ಯಕ್ತಿಯೊಬ್ಬರು ಪಾದಯಾತ್ರೆ ಆರಂಭಿಸಿದ್ದಾರೆ.
ಈ ವ್ಯಕ್ತಿ ಕಾಲಿಘಾಟ್ ತಲುಪಿ ಅಲ್ಲಿ ಸಿಎಂ ಅವರನ್ನು ಭೇಟಿ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಹಾಗೂ ದೋವಾರ್ಸ್ನ ಮಣ್ಣನ್ನು ತನ್ನ ಜತೆಗೆ ತರುತ್ತಿದ್ದಾರೆ. ಸಿಎಂ ಮಮತಾರಿಗೆ ಮಣ್ಣನ್ನು ನೀಡುವ ಮೂಲಕ ರಾಜ್ಯ ಇಬ್ಬಾಗ ಮಾಡದಂತೆ ಮನವಿ ಮಾಡುವ ಆಸೆ ಇವರದಾಗಿದೆ. ಮಮತಾ ಬ್ಯಾನರ್ಜಿ ಸಿಎಂ ಆದ ನಂತರ ರಾಜ್ಯದಲ್ಲಿ ಆರಂಭಿಸಲಾದ ಹಲವಾರು ಜನಪರ ಯೋಜನೆಗಳ ಬಗ್ಗೆ ಮಮತಾ ಬ್ಯಾನರ್ಜಿಯವರಿಗೆ ಅಭಿನಂದನೆ ಕೂಡ ಸಲ್ಲಿಸಲಿದ್ದಾರೆ.
ಸಿಎಂ ಭೇಟಿ ಮಾಡಿ ಹುತಾತ್ಮ ದಿನದಲ್ಲಿ ಭಾಗಿ: ಸಿಎಂ ಅವರನ್ನು ಭೇಟಿ ಮಾಡಿದ ನಂತರ ಜುಲೈ 21 ರಂದು ನಡೆಯಲಿರುವ ಹುತಾತ್ಮ ದಿನಾಚರಣೆಯಲ್ಲಿ ಇವರು ಭಾಗಿಯಾಗಲಿದ್ದು, ಅಂದು ಮರಳಿ ಜಲಪೈಗುರಿಯತ್ತ ಪ್ರಯಾಣ ಬೆಳೆಸಲಿದ್ದಾರೆ.
ಶಂಕರ್ ಭಟ್ಟಾಚಾರ್ಯ ಜಲಪೈಗುರಿ ಜಿಲ್ಲೆಯ ದೋವಾರ್ಸ್ ಬಿನ್ನಗುರಿಯಲ್ಲಿ ವಾಸಿಸುತ್ತಾರೆ ಹಾಗೂ ಅಲ್ಲಿ ಇವರು ಚಿಕ್ಕದೊಂದು ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಾರೆ. ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಇವರು ಯಾವುದೇ ಸ್ಥಾನವನ್ನು ಹೊಂದಿಲ್ಲವಾದರೂ ಇವರು ಪಕ್ಷದ ಕಟ್ಟಾ ಬೆಂಬಲಿಗರಾಗಿದ್ದಾರೆ.
ಜೂನ್ 15 ರಂದು ಶಂಕರ್ ಬಿನ್ನಗುರಿಯಿಂದ ನಡೆಯಲು ಆರಂಭಿಸಿದ್ದರು. ಅವರ ಪಾದಯಾತ್ರೆಗೆ 28 ದಿನಗಳಾಗಿವೆ. ದಿನದಲ್ಲಿ ನಡೆಯುತ್ತ ರಾತ್ರಿ ವಿಶ್ರಾಂತಿ ಪಡೆಯುತ್ತ ಇವರು ಮುಂದೆ ಸಾಗುತ್ತಿದ್ದಾರೆ.
“ಮುಖ್ಯಮಂತ್ರಿಗಳು ಕಳೆದ 11 ವರ್ಷಗಳಲ್ಲಿ ದೋವಾರ್ಸ್ ಜನರ ಅಭಿವೃದ್ಧಿಗಾಗಿ ಚಾ ಸುಂದರಿ ಯೋಜನೆ, ಜಯ ಜಹರ್ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ದೋವಾರ್ಸ್ ಜನರಿಗೆ ಅಭಿವೃದ್ಧಿ ಬೇಕು, ಅವರಿಗೆ ವಿಭಜನೆ ಬೇಕಾಗಿಲ್ಲ. ದೋವಾರ್ಸ್ನ ಮಣ್ಣನ್ನು ಅವರಿಗೆ ಹಸ್ತಾಂತರಿಸುವ ಮೂಲಕ ಇದೇ ಸಂದೇಶವನ್ನು ನಾನು ಅವರಿಗೆ ನೀಡಲು ಬಯಸುತ್ತೇನೆ." ಎಂದು ಶಂಕರ್ ಹೇಳುತ್ತಾರೆ.
ಇದನ್ನು ಓದಿ:ಮಳೆಗಾಗಿ ಪ್ರಾರ್ಥಿಸಿ ನೇಗಿಲು ಹಿಡಿದ ಮಹಿಳೆಯರು: 85 ವರ್ಷದ ವೃದ್ಧೆಯೂ ಭಾಗಿ