ಕಥುವಾ/ಜಮ್ಮು: ಕಥುವಾ ಜಿಲ್ಲೆಯ ತನ್ನ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಖಾತ್ರಿಪಡಿಸುವಂತೆ 3ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ವಿಡಿಯೋ ಸಂದೇಶದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದ್ದಾಳೆ. ಈ ವಿಡಿಯೋ ವೈರಲ್ ಆದ ಕೆಲವೇ ದಿನಗಳಲ್ಲಿ, ಜಮ್ಮು ಮತ್ತು ಕಾಶ್ಮೀರ ಆಡಳಿತವು ಶಾಲೆಗೆ ಹೊಸ ರೂಪ ನೀಡುವ ಕಾರ್ಯಕ್ಕೆ ಮುಂದಾಗಿದೆ.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಲಕಿ ಸೀರತ್ ನಾಜ್ ಮನವಿ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ. ಇದರ ಬೆನ್ನಲ್ಲೇ ಜಮ್ಮುವಿನ ಶಾಲಾ ಶಿಕ್ಷಣ ನಿರ್ದೇಶಕ ರವಿಶಂಕರ್ ಶರ್ಮಾ ಅವರು ದೂರದ ಲೋಹೈ-ಮಲ್ಹಾರ್ ಬ್ಲಾಕ್ನಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದಾರೆ.
ವಿಡಿಯೋದಲ್ಲೇನಿದೆ?: "ಅಸ್ಸಲಾಂ ಅಲೈಕುಂ ಮೋದಿಜಿ. ಕೈಸೆ ಹೋ ಆಪ್? ಸಬ್ ಕಿ ಬಾತ್ ಸುನತೆ ಹೋ, ಮೇರಿ ಭಿ ಬಾತ್ ಸುನೋ (ಹಲೋ, ಮೋದಿಜಿ. ಹೇಗಿದ್ದಿರಿ ನೀವು ಎಲ್ಲರನ್ನೂ ಕೇಳುತ್ತೀರಿ, ದಯವಿಟ್ಟು ನನ್ನ ಮಾತನ್ನೂ ಕೇಳಿ)" ಎಂದು ನಾಲ್ಕು ನಿಮಿಷದ ವಿಡಿಯೋದ ಆರಂಭದಲ್ಲಿ ಬಾಲಕಿ ಸೀರತ್ ನಾಜ್ ಹೇಳಿದ್ದಾಳೆ.
ಶಾಲೆಯ ಶಿಥಿಲಾವಸ್ಥೆಯ ಬಗ್ಗೆ ಮಾತನಾಡಿದ ಸೀರತ್ ನಾಜ್, ವಿದ್ಯಾರ್ಥಿಗಳನ್ನು ಶುಚಿಗೊಳಿಸದೇ ಇರುವ ಕೊಠಡಿಗಳಲ್ಲಿ ಕುಳಿತುಕೊಳ್ಳಲು ಒತ್ತಾಯಿಸಲಾಗುತ್ತದೆ. ಇದರಿಂದ ಆಗಾಗ್ಗೆ ವಿದ್ಯಾರ್ಥಿಗಳ ಸಮವಸ್ತ್ರ ಕಲೆ ಆಗುತ್ತದೆ. ಶೌಚಾಲಯಗಳ ದುಃಸ್ಥಿತಿ, ಬಯಲು ಶೌಚದಿಂದಾಗುತ್ತಿರುವ ಸಮಸ್ಯೆ, ಕಟ್ಟಡ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿರುವ ಬಗ್ಗೆ ವಿವರವಾಗಿ ಹೇಳುವ ಮೂಲಕ ಗಮನ ಸೆಳೆದಿದ್ದಳು. ''ನೀವು ಇಡೀ ರಾಷ್ಟ್ರದ ಬಗ್ಗೆ ಯೋಚನೆ ಮಾಡುತ್ತೀರಿ. ದಯವಿಟ್ಟು ನನ್ನ ಮಾತನ್ನು ಸ್ವಲ್ಪ ಆಲಿಸಿ ಮತ್ತು ನಮಗಾಗಿ ಉತ್ತಮ ಶಾಲೆಯನ್ನು ನಿರ್ಮಿಸಿ, ಇದರಿಂದ ನಾವು ನಮ್ಮ ಶಿಕ್ಷಣವನ್ನು ಮುಂದುವರಿಸಬಹುದು. ನಮ್ಮ ಸಮವಸ್ತ್ರ ಕೊಳಕಾಗುವುದರಿಂದ ನಮ್ಮ ತಾಯಂದಿರಿಂದ ಬೈಸಿಕೊಳ್ಳುವಂತಾಗಿದೆ'' ಎಂದು ಬಾಲಕಿ ಮನವಿ ಮಾಡಿದ್ದಳು.
ಶಾಲೆ ಮೇಲ್ದರ್ಜೆಗೇರಿಸಲು 91 ಲಕ್ಷ ರೂ. ಮಂಜೂರು: ವಿಡಿಯೋ ಕ್ಲಿಪ್ ಅನ್ನು ಗಮನಿಸಿದ ಜಮ್ಮು ಮತ್ತು ಕಾಶ್ಮೀರ ಆಡಳಿತವು ತಕ್ಷಣವೇ ಶಾಲೆಗೆ ಹೊಸ ರೂಪ ನೀಡಲು ಕ್ರಮ ಕೈಗೊಂಡಿತು. ಶಾಲೆಯನ್ನು ಆಧುನಿಕ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು 91 ಲಕ್ಷ ರೂ.ಗಳ ಯೋಜನೆ ಮಂಜೂರು ಮಾಡಲಾಗಿದೆ. ಆಡಳಿತಾತ್ಮಕ ಮಂಜೂರಾತಿಗೆ ಸಂಬಂಧಿಸಿದ ಕೆಲ ಸಮಸ್ಯೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ. ಈಗ ಅದನ್ನು ಇತ್ಯರ್ಥ ಪಡಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಾಲೆಗೆ ಭೇಟಿ ನೀಡಿದ ಜಮ್ಮುವಿನ ಶಾಲಾ ಶಿಕ್ಷಣ ನಿರ್ದೇಶಕ ರವಿಶಂಕರ್ ಶರ್ಮಾ ತಿಳಿಸಿದರು.
ರವಿಶಂಕರ್ ಶರ್ಮಾ ಹೇಳಿದ್ದೇನು?: ಕೇಂದ್ರಾಡಳಿತ ಪ್ರದೇಶದ ದೂರದ ಭಾಗಗಳಲ್ಲಿ ನೂರಾರು ಶಾಲೆಗಳು ನಡೆಯುತ್ತಿವೆ. ಈ ಎಲ್ಲ ಶಾಲೆಗಳಲ್ಲಿ ಸರಿಯಾದ ಮತ್ತು ಆಧುನಿಕ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಈಗಾಗಲೇ ವಿವರವಾದ ಯೋಜನೆಯನ್ನು ರೂಪಿಸಿದೆ. ನಾವು ಜಮ್ಮು ಪ್ರಾಂತ್ಯದ ಎಲ್ಲ ಜಿಲ್ಲೆಗಳಲ್ಲಿ 1,000 ಹೊಸ ಶಿಶು ವಿಹಾರಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದೇವೆ. ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ, ಪ್ರತಿ 10 ಜಿಲ್ಲೆಗಳಲ್ಲಿ (ಜಮ್ಮು ಪ್ರಾಂತ್ಯದಲ್ಲಿ) 250 ಶಿಶುವಿಹಾರಗಳ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.
ಯುಟಿ ಕ್ಯಾಪೆಕ್ಸ್, ಡಿಸ್ಟ್ರಿಕ್ಟ್ ಕ್ಯಾಪೆಕ್ಸ್ ಮತ್ತು ಸಮಗ್ರಾ ಅಡಿಯಲ್ಲಿ ಶಾಲಾ ಮೂಲಸೌಕರ್ಯಗಳನ್ನು ಸುಧಾರಿಸಲು ಮೂರು ರೀತಿಯ ಹಣ ಲಭ್ಯವಿದೆ ಎಂದು ತಿಳಿಸಿದ ರವಿಶಂಕರ್ ಶರ್ಮಾ ಅವರು, 2018ರಿಂದ ಸಮಗ್ರ ಅಡಿಯಲ್ಲಿ 2,500ಕ್ಕೂ ಹೆಚ್ಚು ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಆದರೆ, 6,000 ಯೋಜನೆಗಳು ಇನ್ನೂ ಪ್ರಗತಿಯಲ್ಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಇಲಾಖೆಯು ಯುಟಿ ಕ್ಯಾಪೆಕ್ಸ್ ಮತ್ತು ಜಿಲ್ಲಾ ಕ್ಯಾಪೆಕ್ಸ್ ಅನ್ನು ಸಹ ಬಳಸಿಕೊಳ್ಳುತ್ತಿದೆ ಎಂದರು.
ಪುಟ್ಟ ಬಾಲಕಿ ನಾಜ್, ಗ್ರಾಮಸ್ಥರ ಸಂತಸ: ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗುವ ಗುರಿ ಹೊಂದಿರುವ ನಾಜ್, ''ನನ್ನ ಸಂದೇಶಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ. ನಮ್ಮ ಪ್ರಧಾನ ಮಂತ್ರಿಯೊಂದಿಗೆ ನನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ನಾನೇ ವಿಡಿಯೊವನ್ನು ಮಾಡಿದ್ದೇನೆ. ಈಗ ಕ್ರಮ ತೆಗೆದುಕೊಳ್ಳಲಾಗಿದೆ. ನಮ್ಮ ಶಾಲೆಯು ಹೊಸ ರೂಪ ಪಡೆಯುತ್ತಿದೆ ಎಂದು ನನಗೆ ಖುಷಿಯಾಗಿದೆ" ಎಂದು ಹೇಳಿದಳು. ಗ್ರಾಮಸ್ಥರು ಕೂಡ ಶಾಲೆಯ ನವೀಕರಣದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ನಗರ ಪ್ರದೇಶದ ಶಾಲೆಗಳಿಗೆ ಸರಿಸಮಾನವಾಗಿ ಅಭಿವೃದ್ಧಿ ಹೊಂದುವ ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಜ್ಯಪಾಲರು-ರಾಜ್ಯ ಸರ್ಕಾರಗಳ ನಡುವೆ ಬಿಕ್ಕಟ್ಟು: ಬಿಜೆಪಿಯೇತರ ಸಿಎಂಗಳ ಸಭೆಗೆ ನಿರ್ಧಾರ