ನವದೆಹಲಿ: ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಶುಕ್ರವಾರ ಬೈಕುಲ್ಲಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಬುಧವಾರ ಜಾಮೀನು ನೀಡಿತ್ತು. ಜೈಲಿನಿಂದ ಬಿಡುಗಡೆಯಾದ ಬಳಿಕ ಇಂದ್ರಾಣಿ ಮುಖರ್ಜಿ ವರ್ಲಿಯಲ್ಲಿರುವ ಫ್ಲಾಟ್ನಲ್ಲಿ ಉಳಿಯಲಿದ್ದಾರೆ. 2015 ರಲ್ಲಿ ಈ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ, ಮುಖರ್ಜಿ ಇಷ್ಟು ವರ್ಷ ಜೈಲಿನಲ್ಲಿದ್ದರು. ಇತ್ತೀಚೆಗೆ ಮುಖರ್ಜಿ ಅವರು ತಮ್ಮ ಮಗಳು ಶೀನಾ ಬೋರಾ ಜೀವಂತವಾಗಿದ್ದಾರೆ ಎಂದು ಸಿಬಿಐಗೆ ಪತ್ರ ಬರೆಯುವ ಮೂಲಕ ಸಂಚಲನ ಮೂಡಿಸಿದ್ದರು.
ಮುಂಬೈ ಪೊಲೀಸರು ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ ನಂತರ 2015 ರಿಂದ ಶೀನಾ ಬೋರಾ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಮುಂಬೈ ಪೊಲೀಸರು ದಾಖಲಿಸಿರುವ ಪ್ರಕರಣದ ಪ್ರಕಾರ, ಏಪ್ರಿಲ್ 2012 ರಲ್ಲಿ ಶೀನಾ ಬೋರಾ ಅವರನ್ನು ಅಪಹರಿಸಿ ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ಆಗಸ್ಟ್ 2015 ರಲ್ಲಿ ಮತ್ತೊಂದು ಪ್ರಕರಣದಲ್ಲಿ ಇಂದ್ರಾಣಿ ಮುಖರ್ಜಿ ಅವರ ಚಾಲಕ ಶ್ಯಾಮ್ವರ್ ರೈ ಅವರನ್ನು ಬಂಧಿಸಿದ ನಂತರ ಈ ಪ್ರಕರಣವು ಮೊದಲು ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಶೀನಾ ಬೋರಾ ಹತ್ಯೆ ಕೇಸ್: ಪ್ರಮುಖ ಆರೋಪಿ, ತಾಯಿ ಇಂದ್ರಾಣಿ ಮುಖರ್ಜಿಗೆ ಜಾಮೀನು
ತನಿಖೆಯ ವೇಳೆ ಆತ 2012ರ ಏಪ್ರಿಲ್ನಲ್ಲಿ ಶೀನಾ ಬೋರಾಳನ್ನು ಕೊಲೆ ಮಾಡಿ ಶವವನ್ನು ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಕೊಲೆಯಲ್ಲಿ ಶೀನಾ ಅವರ ತಾಯಿ ಇಂದ್ರಾಣಿ ಮತ್ತು ಸಂಜೀವ್ ಖನ್ನಾ (ಇಂದ್ರಾನಿಯ ಮಾಜಿ ಪತಿ) ಕೂಡ ಭಾಗಿಯಾಗಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದರು.