ನವದೆಹಲಿ: ದೇಶಾದ್ಯಂತ ಕೋವಿಡ್ ಎರಡನೇ ಅಲೆ ಉಲ್ಬಣಗೊಂಡಿದ್ದು, ದೆಹಲಿ ಸೇರಿದಂತೆ ಅನೇಕ ರಾಜ್ಯಗಳ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಎದುರಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವ ಭಾರತ ಸರ್ಕಾರ, ಆಮ್ಲಜನಕ ಉತ್ಪಾದನಾ ಘಟಕಗಳು ಮತ್ತು ಕಂಟೈನರ್ಗಳನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಲು ಮುಂದಾಗಿದೆ.
23 ಮೊಬೈಲ್ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಜರ್ಮನಿಯಿಂದ ತರಿಸಿಕೊಂಡು, ತುರ್ತು ಪರಿಸ್ಥಿತಿ ಹಾಗೂ ಅಗತ್ಯವಿರುವ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತದೆ. ಇವುಗಳನ್ನು ಜರ್ಮನಿಯಿಂದ ಭಾರತಕ್ಕೆ ಸಾಗಿಸಲು ವಿಮಾನ ಹಾರಾಟಕ್ಕೆ ಭಾರತೀಯ ವಾಯುಸೇನೆ (ಐಎಎಫ್)ಯನ್ನು ನಿಯೋಜಿಸಲು ಸರ್ಕಾರ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಹೆಚ್ಚಿದ ಆಕ್ಸಿಜನ್ ಸಿಲಿಂಡರ್ ಕಳ್ಳತನ ಪ್ರಕರಣ: ಪೊಲೀಸ್ ಸರ್ಪಗಾವಲಿನಲ್ಲಿ ಆಮ್ಲಜನಕ ಪೂರೈಕೆ
ಆಕ್ಸಿಜನ್ ಕೊರತೆಯಿಂದ ಅನೇಕ ಕೋವಿಡ್ ರೋಗಿಗಳು ಕೊನೆಯುಸಿರೆಳೆಯುತ್ತಿದ್ದಾರೆ. ಕೊರೊನಾ ಎದುರಿಸಲು ಮಿಲಿಟರಿ ಮೂಲ ಸೌಕರ್ಯವನ್ನು ಹೇಗೆ ಬಳಸಬಹುದು ಎಂಬುದರ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ಸಿದ್ಧತೆ ಪರಿಶೀಲನಾ ಸಭೆಯಲ್ಲಿ ಚರ್ಚಿಸಲಾಗಿದೆ. ಹೀಗಾಗಿ ಭಾರತೀಯ ವಾಯುಸೇನೆ ಬೆಂಬಲದ ಮೂಲಕ ಜರ್ಮನಿಯಿಂದ ಆಮ್ಲಜನಕ ಉತ್ಪಾದನಾ ಘಟಕಗಳನ್ನ ಆಮದು ಮಾಡಿಕೊಳ್ಳಲಾಗುತ್ತದೆ.
ಈಗಾಗಲೇ ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟಕ್ಕೆ ಸರ್ಕಾರಕ್ಕೆ ಸಹಾಯ ಮಾಡುತ್ತಿರುವ ಐಎಎಫ್, ದೆಹಲಿಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ಯ ಕೋವಿಡ್ ಆಸ್ಪತ್ರೆಯನ್ನು ಸ್ಥಾಪಿಸಲು ಇಲ್ಲಿಯವರೆಗೆ ಕೊಚ್ಚಿ, ಮುಂಬೈ, ವಿಶಾಖಪಟ್ಟಣಂ ಮತ್ತು ಬೆಂಗಳೂರಿನಿಂದ ವೈದ್ಯರನ್ನು ಕರೆತಂದು ನೇಮಿಸಿದೆ.