ಅಮೃತಸರ: ಪೊಲೀಸರಿಗೆ ಭರ್ಜರಿ ಯಶಸ್ಸು ಸಿಕ್ಕಿದ್ದು, 12 ಗಂಟೆಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣದಲ್ಲಿ ಮೃತನ ಪತ್ನಿ ಸೇರಿದಂತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಅಪರಾಧ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ ಮತ್ತು ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಏನಿದು ಘಟನೆ: ಸಚ್ಖಂಡ್ ಶ್ರೀ ಹರ್ಮಂದಿರ್ ಸಾಹಿಬ್ ದರ್ಶನಕ್ಕೆಂದು ಬೆಳಗ್ಗೆ ಹರಿಂದರ್ ಸಿಂಗ್ ತಮ್ಮ ಪತ್ನಿ ಮತ್ತು ಇಬ್ಬರು ಹೆಣ್ಮಕ್ಕಳೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ, ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಬಂದ ಬೈಕರ್ಸ್ ಹರಿಂದರ್ ಸಿಂಗ್ ಕುಟುಂಬವನ್ನು ಅಡ್ಡಗಟ್ಟಿ ಗುಂಡು ಹಾರಿಸಿ ಪರಾರಿಯಾಗಿದ್ದರು. ಹರಿಂದರ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದವರಿಗೆ ಯಾವುದೇ ರೀತಿಯ ಗಾಯಗಳಾಗಿರಲಿಲ್ಲ. ಬಳಿಕ ಈ ಘಟನೆ ಕುರಿತು ಮೃತ ಹರಿಂದರ್ ಸಿಂಗ್ ಪತ್ನಿಯ ಹೇಳಿಕೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಈ ಪ್ರಕರಣವನ್ನು ಪೊಲೀಸರು ಕೇವಲ 12 ಗಂಟೆಯೊಳಗೆ ಬಗೆಹರಿಸಿದ್ದಾರೆ. ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಅರುಣ್ ಪಾಲ್ ಸಿಂಗ್, ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಷದೀಪ್ ಸಿಂಗ್ ಮತ್ತು ವರೀಂದರ್ ಸಿಂಗ್ ಆರೋಪಿಗಳಿಬ್ಬರನ್ನು ಪತ್ತೆ ಹಚ್ಚುವಲ್ಲಿ ನಮ್ಮ ಇಲಾಖೆ ಯಶಸ್ವಿಯಾಗಿದೆ ಎಂದು ಅಧಿಕಾರಿ ತಿಳಿಸಿದರು.
ಓದಿ: ಕುಟುಂಬದೊಂದಿಗೆ ಗುರುದ್ವಾರಕ್ಕೆ ತೆರಳುತ್ತಿದ್ದ ಎನ್ಆರ್ಐಗೆ ಗುಂಡಿಕ್ಕಿ ಕೊಲೆ
ನಾನು, ನನ್ನ ಪತಿ ಮತ್ತು ನನ್ನ ಹೆಣ್ಮಕ್ಕಳಿಬ್ಬರು ಬೈಕ್ನಲ್ಲಿ ಸಚ್ಖಂಡ್ನ ಶ್ರೀ ಹರ್ಮಂದಿರ್ ಸಾಹಿಬ್ ದರ್ಶನಕ್ಕೆ ಹೋಗುತ್ತಿದ್ದೇವೆ. ಬೈಕ್ನಲ್ಲಿ ಅಡ್ಡದಿಡ್ಡಿಯಾಗಿ ಬಂದ ಆರೋಪಿಗಳು ನಮ್ಮ ಬೈಕ್ನ್ನು ತಳ್ಳಿದ್ದಾರೆ. ಬಳಿಕ ನನ್ನ ಗಂಡನ ಪರ್ಸ್ ದೋಚಲ ಯತ್ನಿಸುತ್ತಿದ್ದರು. ಈ ವೇಳೆ, ನನ್ನ ಪತಿ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ದುಷ್ಕರ್ಮಿಗಳು ನನ್ನ ಪತಿ ಮೇಲೆ ಗುಂಡು ಹಾರಿಸಿ ಪರಾರಿಯಾದರು. ಬಳಿಕ ನಾನು ಸ್ಥಳೀಯರ ನೆರವಿನಿಂದ ನನ್ನ ಗಂಡನನ್ನು ಆಸ್ಪತ್ರೆಗೆ ಕರೆದೊಯ್ದೆ. ಆದರೆ, ಅಲ್ಲಿ ವೈದ್ಯರು ಹರೀಂದರ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಮೃತನ ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದರು.
ಪೊಲೀಸ್ ಅಧಿಕಾರಿಗಳು ಕೂಲಂಕಷವಾಗಿ ತನಿಖೆ ನಡೆಸಿದಾಗ ಹರೀಂದರ್ ಸಿಂಗ್ನ್ನು ಕೊಲೆ ಮಾಡಿದ್ದು ಪತ್ನಿ ಸತ್ನಮ್ ಕೌರ್, ಅರ್ಷದೀಪ್ ಸಿಂಗ್ ಮತ್ತು ವರೀಂದರ್ ಸಿಂಗ್ ಎಂಬ ಸತ್ಯ ಹೊರಬಿದ್ದಿದೆ. ಹರಿಂದರ್ ಸಿಂಗ್ ದುಬೈನಲ್ಲಿದ್ದಾಗ ಸತ್ನಮ್ ಕೌರ್ ಮತ್ತು ಅರ್ಷದೀಪ್ ಜೊತೆ ವಿವಾಹೇತರ ಸಂಬಂಧ ಬೆಳದಿದೆ. ಇದನ್ನು ಹರೀಂದರ್ ಸಿಂಗ್ಗೆ ಗೊತ್ತಾಗಿದೆ. ಹೀಗಾಗಿ ಹರಿಂದರ್ ಸಿಂಗ್ ತನ್ನ ಹೆಂಡತಿ ಮೇಲೆ ನಿಗಾ ಇಡಲು ಪ್ರಾರಂಭಿಸಿದ್ದನು ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಹರೀಂದರ್ ನಿಗಾ ವಹಿಸಿದ್ದ ಕಾರಣ ಸತ್ನಮ್ ಕೌರ್ ಮತ್ತು ಅರ್ಷದೀಪ್ ಸಿಂಗ್ ಭೇಟಿಗೆ ಅಡ್ಡಿಯಾಗುತ್ತಿತ್ತು. ಹೀಗಾಗಿ ಇಬ್ಬರೂ ಹರೀಂದರ್ ಸಿಂಗ್ನ ಕೊಲೆಗೆ ಸಂಚು ರೂಪಿಸಿ ವರೀಂದರ್ ಸಿಂಗ್ಗೆ 2,70,000 ರೂ.ಗೆ ಸುಪಾರಿ ನೀಡಿದ್ದರು. ಅದರಂತೆ ಹರೀಂದರ್ ಸಿಂಗ್ ಅವರ ಕೊಲೆಯನ್ನು ವರೀಂದರ್ ಸಿಂಗ್ ಮಾಡಿ ಪರಾರಿಯಾಗಿದ್ದ. 12 ಗಂಟೆಯೊಳಗೆ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದ, ಈ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಕಮಿಷನರ್ ಅರುಣ್ ಪಾಲ್ ಸಿಂಗ್ ಹೇಳಿದರು.