ಪುಣೆ (ಮಹಾರಾಷ್ಟ್ರ): ಸಶಸ್ತ್ರ ಪಡೆಗಳ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯಬೇಕಾಗಿದೆ. ಅಷ್ಟೇ ಅಲ್ಲದೆ, ಯುವಜನರಲ್ಲಿ ವೃತ್ತಿ ಆಯ್ಕೆಯಾಗಿ ಸೇನೆಯನ್ನು ಆಯ್ದುಕೊಳ್ಳಲು ಹೆಚ್ಚಿನ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಹೇಳಿದರು.
ಇಲ್ಲಿನ ಮಹಾರಾಷ್ಟ್ರ ಎಜ್ಯುಕೇಶನ್ ಸೊಸೈಟಿ ನಡೆಸುತ್ತಿರುವ ಬಾಲಕಿಯರ ಮಿಲಿಟರಿ ಆಧಾರಿತ ಶಾಲೆಯಾದ ರಾಣಿ ಲಕ್ಷ್ಮಿಬಾಯಿ ಮುಲಿಂಚಿ ಸೈನಿಕಿ ಶಾಲೆಯ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. "ಭಾರತೀಯ ರಕ್ಷಣಾ ಪಡೆಗಳು ಮತ್ತು ಸೇನೆಯು ವಿಶೇಷವಾಗಿ ಲಿಂಗ ಸಮಾನತೆ-ಮಹಿಳಾ ಸಬಲೀಕರಣವನ್ನು ನಂಬುತ್ತದೆ" ಎಂದರು.
"ಎಲ್ಲಾ ಅಧಿಕಾರಿಗಳು ಮತ್ತು ಸೈನಿಕರು ಲಿಂಗವನ್ನು ಲೆಕ್ಕಿಸದೆ ರಾಷ್ಟ್ರದ ಸೇವೆ ಮಾಡಲು ಮತ್ತು ಅವರ ವೃತ್ತಿಜೀವನದ ಭವಿಷ್ಯವನ್ನು ಹೆಚ್ಚಿಸಲು ಸಮಾನ ಅವಕಾಶವನ್ನು ಪಡೆಯುತ್ತಾರೆ. ಮಹಿಳಾ ಅಧಿಕಾರಿಗಳು ಭಾರತೀಯ ಸೇನೆಯಲ್ಲಿ ಅಪಾರ ಪ್ರಮಾಣದ ಮುಖ್ಯ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ. ಅವರಿಗೆ ಗರಿಷ್ಠ ಮಾನ್ಯತೆ ನೀಡಲು ನಾವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದೇವೆ" ಎಂದು ಹೇಳಿದರು.
"ಭಾರತೀಯ ಸೇನೆಯು ದೇಶದ ವಿಶಿಷ್ಟ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಈ ಮೂಲಕ ಸೈನ್ಯವು ಮಿನಿ ಇಂಡಿಯಾವನ್ನು ಪ್ರತಿಬಿಂಬಿಸುತ್ತದೆ. ಇನ್ನು ಇದರ ಜೊತೆಗೆ ಅಸಮಾನತೆಯ ಬಗ್ಗೆ ಸ್ವಲ್ಪ ಆತ್ಮಾವಲೋಕನ ಅಗತ್ಯವಿದೆ ಎಂದು ಹೇಳಿದರು.
"ಸಶಸ್ತ್ರ ಪಡೆಗಳ ಬಗ್ಗೆ ಯುವಜನರಲ್ಲಿ ಆದ್ಯತೆಯ ವೃತ್ತಿ ಆಯ್ಕೆಯಾಗಿ ಹೆಚ್ಚಿನ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಅವರಿಗೆ ಸಾಕಷ್ಟು ಮಾರ್ಗದರ್ಶನ ಮತ್ತು ಅವಕಾಶವನ್ನು ನೀಡಬೇಕಾಗಿದೆ. ನಾವೆಲ್ಲರು ಕೈಜೋಡಿಸಿ ಈ ಕಾರ್ಯವನ್ನು ಪ್ರಾರಂಭಿಸಬೇಕಾಗಿದೆ. ಈ ಶಾಲೆಯು ಅದರಲ್ಲಿ ಒಂದು ಪ್ರಮುಖ ಹೆಜ್ಜೆಯಾಗಲಿ" ಎಂದು ಸೇನೆಯ ಮುಖ್ಯಸ್ಥರು ಹೇಳಿದರು.