ಪಶ್ಚಿಮ ಬಂಗಾಳ: ಇಲ್ಲಿನ ಅಮುಗ್ರಿಯ ಉಪನಗರದಲ್ಲಿರುವ ಚಾಪ್ಗಢ ಎಂಬ ಗ್ರಾಮದಲ್ಲಿರುವ ಬಡ ಕುಟುಂಬವೊಂದು ಸರ್ಕಾರದ ಎಲ್ಲ ಯೋಜನೆಗಳಿಂದ ವಂಚಿತವಾಗಿದೆ. ಕಳೆದ ಐದಾರು ವರ್ಷಗಳಿಂದ ಚಿಕ್ಕದಾದ ತಾತ್ಕಾಲಿಕ ಶೆಡ್ನಲ್ಲಿ ಜೀವನ ನಡೆಸುತ್ತಿದ್ದು, ಕನಿಷ್ಠ ಕುಡಿಯಲು ಸರಿಯಾದ ನೀರು ಕೂಡ ಇಲ್ಲದಾಗಿದೆ. ಲಕ್ಷ್ಮಿ ಮೋಹನ್ ರಾಯ್ ಕುಟುಂಬ ಸರ್ಕಾರದ ಯೋಜನೆಗಳಿಂದ ವಂಚಿತಗೊಂಡಿದೆ. ಸೂರಿಯಾಗಿ ಸರ್ಕಾರದ ಮೊರೆ ಹೋದರೂ ಯಾವುದೂ ಕೈ ಸೇರಿಲ್ಲ ಅನ್ನೋದು ಇವರ ಆರೋಪವಗಿದೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾದಲ್ಲಿ ಬಳಸಿದ ಇವಿಎಂ ಕರ್ನಾಟಕದಲ್ಲಿ ಬಳಸಿಲ್ಲ: ಕಾಂಗ್ರೆಸ್ ಆರೋಪಕ್ಕೆ ಚುನಾವಣಾ ಆಯೋಗದ ಸ್ಪಷ್ಟನೆ
'ಕಳೆದ ಐದಾರು ವರ್ಷಗಳಿಂದ ಸೂರು ಸೇರಿದಂತೆ ಸರ್ಕಾರದ ಯಾವುದೇ ಯೋಜನೆಗಳು ನಮಗೆ ಸಿಗುತ್ತಿಲ್ಲ. ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳ ಸುತ್ತ ತಿರುಗಿದರೂ ಯಾರೂ ಕ್ಯಾರೇ ಎನ್ನುತ್ತಿಲ್ಲ' ಎಂದು ಲಕ್ಷ್ಮಿ ಮೋಹನ್ ರಾಯ್ ತಮ್ಮ ನೋವು ತೋಡಿಕೊಂಡಿದ್ದಾರೆ. ನಾವು ಕೂಲಿ ಮಾಡಿ ಜೀವನ ನಡೆಸುವವರು, ಚಿಕ್ಕದಾದ ಶೆಡ್ ಹಾಕಿಕೊಂಡಿದ್ದೇವೆ. ಗಾಳಿ-ಮಳೆ ಬಂದರೆ ನಮ್ಮ ಜೀವನ ಬೀದಿ ಪಾಲು ಎಂದು ಕುಟುಂಬದ ಸದಸ್ಯರು ಅಳಲು ಹೇಳಿಕೊಂಡಿದ್ದಾರೆ.

'ಸುತ್ತಲೂ ಭಯದ ವಾತಾವರಣವಿದೆ. ನಮಗೆ ಕುಡಿಯಲು ನೀರು ಸೇರಿದಂತೆ ಇತರೆ ಯಾವುದೇ ಮೂಲಭೂತ ಸೌಕರ್ಯ ದೊರೆಯುತ್ತಿಲ್ಲ. ನಮಗೊಂದು ಸೂರು ಕಲ್ಪಿಸಿಕೊಡುವಂತೆ ಕಳೆದ ಐದಾರು ವರ್ಷಗಳಿಂದ ಮನವಿ ಮಾಡಿದರೂ ಯಾವ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಇದರಿಂದ ಮಕ್ಕಳು ಸೇರಿದಂತೆ ಇಡೀ ಕುಟುಂಬ ಭಯದಲ್ಲಿಯೇ ಜೀವನ ನಡೆಸುತ್ತಿದೆ. ಮನೆಯ ಸಮೀಪವೇ ಸಣ್ಣ ಬಾವಿ ತೋಡಿದ್ದು ಆ ಬಾವಿಯ ನೀರನ್ನು ಕುಡಿಯುತ್ತೇವೆ. ಚುನಾವಣೆ ಬಂದಾಗ ಮಾತ್ರ ನಮ್ಮನ್ನು ಹುಡುಕುತ್ತಾರೆ. ಆ ನಂತರ ಯಾರೂ ನಮ್ಮ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಲಕ್ಷ್ಮಿ ಮೋಹನ್ ರಾಯ್ ಅವರ ಚಿಕ್ಕಮ್ಮ ಶೋಭಾ ರಾಯ್ ತಮ್ಮ ನೋವು ಹೇಳಿಕೊಂಡಿದ್ದಾರೆ.

'ಲಕ್ಷ್ಮೀಮೋಹನ್ ರಾಯ್ ಅವರು ಮೂಲತಃ ಅಲಿಪುರದೌರ್ ಗ್ರಾಮದ ನಿವಾಸಿಗರು. ಅವರು ಅಲ್ಲಿಯ ಪಡಿತರ ಚೀಟಿಯನ್ನು ಮಾತ್ರ ಹೊಂದಿದ್ದಾರೆ. ಇದರಿಂದ ಅವರಿಗೆ ಸರ್ಕಾರದ ಯಾವುದೇ ಯೋಜನೆಗಳು ಸಿಗುತ್ತಿಲ್ಲ. ಆದರೆ, ಮಾನವೀಯ ಮೌಲ್ಯದ ಹಿನ್ನೆಲೆಯಲ್ಲಿ ನಾವು ಅವರಿಗೆ ಸಹಾಯ ಮಾಡುವುದಾಗಿ ಮಾತು ಕೊಟ್ಟಿದ್ದೇವೆ. ಅವರ ಪರಿಸ್ಥಿತಿ ಬಗ್ಗೆ ಕೆಲ ದಿನಗಳ ಹಿಂದೆಯಷ್ಟೇ ನಮಗೆ ತಿಳಿದು ಬಂದಿದೆ. ಕೂಡಲೇ ಅವರನ್ನು ದೀದಿ ಸುರಕ್ಷಾ ಕವಚ ಯೋಜನೆಯಡಿಗೆ ಸೇರಿಸಿಕೊಳ್ಳುತ್ತೇವೆ. ಸದ್ಯಕ್ಕೆ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಮಾಡಿಸಿದ್ದೇವೆ. ಅವರಿಗೆ ನಮ್ಮ ಗ್ರಾಮ ಪಂಚಾಯಿತಿಯಿಂದ ಸ್ವಂತ ಹಣದಲ್ಲಿ ಮನೆ ನಿರ್ಮಿಸಿಕೊಡುತ್ತೇವೆ. ಅಲ್ಲದೇ ಅಕ್ಕಿ, ಬೇಳೆ ಸೇರಿದಂತೆ ಇತರೆ ಅಗತ್ಯ ವಸ್ತುಗಳನ್ನು ನೀಡುತ್ತೇವೆ ಎಂದು ಅಮುಗ್ರಿ ಸರಪಂಚ್ ದಿಲೀಪ್ ರಾಯ್ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ದೇಶದ ಗಮನ ಸೆಳೆದ ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ: ಜಾತಿ ಲೆಕ್ಕಾಚಾರ, ಬೆಟ್ಟಿಂಗ್ ಭರಾಟೆ ಜೋರು