ಹೈದರಾಬಾದ್ (ತೆಲಂಗಾಣ): ದೇಶದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾದ ಮಾಜಿ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ ಇಂದು ಹೈದರಾಬಾದ್ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪ್ರಧಾನಿ ಮೋದಿ ಭಾಗವಹಿಸಿದ್ದ ಬೃಹತ್ ಸಮಾವೇಶದಲ್ಲಿ ರೆಡ್ಡಿ ಕಮಲ ಪಕ್ಷಕ್ಕೆ ಸೇರಿದರು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಭಾಗವಾಗಿ ಇಲ್ಲಿನ ಪರೇಡ್ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ರೆಡ್ಡಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.
ಕಳೆದ ವಾರ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ತರುಣ್ ಚುಗ್ ಅವರನ್ನು ವಿಶ್ವೇಶ್ವರ ರೆಡ್ಡಿ ಭೇಟಿ ಮಾಡಿ, ಕೇಸರಿ ಪಡೆ ಸೇರುವ ಬಗ್ಗೆ ನಿರ್ಧಾರ ಕೈಗೊಂಡಿದ್ದರು. ಈ ವೇಳೆ ಮಾತನಾಡಿದ್ದ ಅವರು ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್ಎಸ್ಗೆ ಬಿಜೆಪಿ ಮಾತ್ರವೇ ಪರ್ಯಾಯ ಶಕ್ತಿ ಎಂದಿದ್ದರು.
ಯಾರು ಈ ರೆಡ್ಡಿ?: ವೃತ್ತಿಯಲ್ಲಿ ಇಂಜಿನಿಯರ್ ಆಗಿ ವಿಶ್ವೇಶ್ವರ ರೆಡ್ಡಿ, ಅಪೋಲೋ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕಿ ಸಂಗೀತಾ ರೆಡ್ಡಿ ಅವರ ಪತಿ. 2019ರ ಚುನಾವಣೆಯಲ್ಲಿ ತಮಗೆ 895 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿದ್ದರು.
2014ರಲ್ಲಿ ಟಿಆರ್ಎಸ್ ಅಭ್ಯರ್ಥಿಯಾಗಿ ಚೆವೆಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆಗೆ ಪ್ರವೇಶಿಸಿದ್ದರು. ನಂತರ ಅವರು 2019ರ ಚುನಾವಣೆಗೆ ಮೊದಲು ಟಿಆರ್ಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಆಗ ಚೇವೆಲ್ಲಾ ಕ್ಷೇತ್ರದಿಂದ ಮತ್ತೊಮ್ಮೆ ಆಯ್ಕೆ ಬಯಸಿ ಸ್ಪರ್ಧಿಸಿದ್ದರು. ಆದರೆ, ಟಿಆರ್ಎಸ್ ಅಭ್ಯರ್ಥಿ ಎದುರು ಸೋಲು ಕಂಡಿದ್ದರು. ಇತ್ತೀಚಿಗೆ ಅವರು ಹೊಸ ಪಕ್ಷ ಕಟ್ಟುವ ಸುಳಿವು ಸಹ ನೀಡಿದ್ದರು.
ಗದ್ದರ್ ಪ್ರತ್ಯಕ್ಷ: ತೆಲಂಗಾಣದ ಕ್ರಾಂತಿಕಾರಿ ಗಾಯಕ ಗದ್ದರ್ ಪ್ರತ್ಯಕ್ಷ ಬಿಜೆಪಿಯ ಬಹಿರಂಗ ಸಭೆಯಲ್ಲಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದರು. ಈ ವೇಳೆ ಮಾತನಾಡಿದ ಅವರು, ದೇಶ ಮತ್ತು ತೆಲಂಗಾಣದ ಕುರಿತು ಪ್ರಧಾನಿ ಮೋದಿ ಏನು ಮಾತನಾಡುತ್ತಾರೆ ಎಂದು ಕೇಳಲು ಬಂದಿರುವೆ ಎಂದಷ್ಟೇ ಹೇಳಿದರು.
ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ: ಖಾದ್ಯಗಳನ್ನು ಖುದ್ದಾಗಿ ಪರಿಶೀಲಿಸಿ ರುಚಿ ಸವಿದ ಪ್ರಧಾನಿ