ವಿಜಯವಾಡ(ಆಂಧ್ರಪ್ರದೇಶ): ಆಂಧ್ರಪ್ರದೇಶ ಮೂಲದ ಯುವಕನೊಬ್ಬ ಪೊಲೀಸರ ಕೈಗೆ ಸಿಗದ ರೀತಿಯಲ್ಲಿ ವಿದೇಶಕ್ಕೆ ಡ್ರಗ್ಸ್ ಕಳುಹಿಸಲು ಹೋಗಿ, ಇದೀಗ ಖಾಕಿ ಪಡೆ ಕೈಗೆ ಸಿಕ್ಕಿಬಿದ್ದಿದ್ದಾನೆ. ವಿಜಯವಾಡದಿಂದ ಆಸ್ಟ್ರೇಲಿಯಾಕ್ಕೆ ಕೊರಿಯರ್ ಕಂಪನಿ ಮೂಲಕ ಡ್ರಗ್ಸ್ ಸಾಗಣೆ ಮಾಡ್ತಿದ್ದ ಈ ವ್ಯಕ್ತಿ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ವಿಜಯವಾಡದ ಭಾರತಿ ನಗರದ ಕೊರಿಯರ್ ಕಂಪನಿ ಮೂಲಕ ಅಕ್ರಮ ಮಾದಕ ದ್ರವ್ಯ ಆಸ್ಟ್ರೇಲಿಯಾಗೆ ರವಾನೆ ಮಾಡ್ತಿದ್ದನು. ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ವಿಜಯವಾಡದಿಂದ ಬಂದಿರುವ ಪಾರ್ಸೆಲ್ ತಪಾಸಣೆಗೊಳಪಡಿಸಿದಾಗ ಈ ಡ್ರಗ್ಸ್ ಪತ್ತೆಯಾಗಿದ್ದು, ಆರೋಪಿ ಗೋಪಿಸಾಯಿ ಎಂಬಾತನ ಬಂಧಿಸಿದ್ದಾರೆ. ಗೋಪಿಸಾಯಿ ಮೂಲತಃ ಪಲ್ನಾಡು ಜಿಲ್ಲೆಯವನಾಗಿದ್ದು, ಇಂಜಿನಿಯರಿಂಗ್ ಮುಗಿದ ಬಳಿಕ ಹೈದರಾಬಾದ್ನಲ್ಲಿ ಕೆಲಸ ಮಾಡ್ತಿದ್ದಾನೆ.
ಈ ವರ್ಷದ ಜನವರಿ ತಿಂಗಳಲ್ಲಿ ವಿಜಯವಾಡದ ಭಾರತೀನಗರದಲ್ಲಿರುವ ಡಿಎಸ್ಟಿ ಕೊರಿಯರ್ ಮೂಲಕ ಆಸ್ಟ್ರೇಲಿಯಾಕ್ಕೆ ಪಾರ್ಸೆಲ್ ಮಾಡಿದ್ದಾನೆ. ಈ ವೇಳೆ, ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಯೊಬ್ಬ ಪಾರ್ಸೆಲ್ ಕಳುಹಿಸಲು ಆಧಾರ್ ಕಾರ್ಡ್ ಕಡ್ಡಾಯ ಎಂದು ಗೋಪಿಗೆ ತಿಳಿಸಿದ್ದನು. ಗೋಪಿ ನೀಡಿರುವ ಆಧಾರ್ ಕಾರ್ಡ್ ಜೆರಾಕ್ಸ್ ಸ್ಪಷ್ಟವಾಗಿರಲಿಲ್ಲ. ಹೀಗಾಗಿ ಮತ್ತೊಮ್ಮೆ ನೀಡುವಂತೆ ತಿಳಿಸಿದ್ದಾರೆ.
ಈ ವೇಳೆ ಗೋಪಿ, ತಾನು ಯಾವಾಗಲೂ ಇಲ್ಲಿಂದಲೇ ಕೊರಿಯರ್ ಮಾಡುವುದಾಗಿ ತಿಳಿಸಿದ್ದು, ಆಧಾರ್ ಕಾರ್ಡ್ನ ಇನ್ನೊಂದು ಪ್ರತಿ ನೀಡಲು ಸಾಧ್ಯವಿಲ್ಲ ಎಂದಿದ್ದಾನೆ. ಈ ವೇಳೆ, ಅಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿ ತನ್ನ ಆಧಾರ್ ಕಾರ್ಡ್ ಸಂಖ್ಯೆ ನೀಡಿ, ಆಸ್ಟ್ರೇಲಿಯಾಗೆ ಕೊರಿಯರ್ ಮಾಡಿದ್ದಾನೆ. ಆದರೆ, ಪಾರ್ಸೆಲ್ನ ಮೇಲೆ ಸರಿಯಾದ ವಿವರ ಇರದ ಕಾರಣ ಕೊರಿಯರ್ ಕೆನಡಾಗೆ ಹೋಗಿ ವಾಪಸ್ ಆಗಿದೆ. ಅದು ಬೆಂಗಳೂರಿಗೆ ಬರುತ್ತಿದ್ದಂತೆ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪಾರ್ಸೆಲ್ ವಶಕ್ಕೆ ಪಡೆದುಕೊಂಡು, ಪರಿಶೀಲನೆಗೊಳಪಡಿದಾಗ ಅದರಲ್ಲಿ 4.49 ಕೆಜಿ ಡ್ರಗ್ಸ್ ಇರುವುದು ಪತ್ತೆಯಾಗಿದೆ. ಈ ವೇಳೆ, ಅದರ ಮೇಲಿನ ಆಧಾರ್ ಕಾರ್ಡ್ ಸಂಖ್ಯೆಯಿಂದ ಆರೋಪಿಯನ್ನ ಗುರುತಿಸಿದ್ದು, ಏಪ್ರಿಲ್ 27ರಂದು ಬಂಧನ ಮಾಡಿದ್ದಾರೆ.
ಇದನ್ನೂ ಓದಿ: ರಸ್ತೆ ಬದಿ ವ್ಯಾಪಾರಿಗಳಿಗೆ ನೀರಿನ ಬಾಟಲಿ ನೀಡಿ, ಎಲ್ಲರ ಮನಗೆದ್ದ ಪುಟ್ಟ ಬಾಲಕ!
ಕಸ್ಟಮ್ಸ್ ಅಧಿಕಾರಿಗಳು ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಯನ್ನ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ,ನಿಜವಾದ ಆರೋಪಿಯ ಮಾಹಿತಿ ಲಭ್ಯವಾಗಿದೆ. ಇದರ ಬೆನ್ನಲ್ಲೇ ಆರೋಪಿ ಗೋಪಿಯನ್ನ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಇದೀಗ ಹೆಚ್ಚಿನ ತನಿಖೆಗೊಳಪಡಿಸಲಾಗಿದೆ.