ಹೈದರಾಬಾದ್: ನ್ಯಾಯಮೂರ್ತಿ ವಿ ಸಿ ಸಿಂಗ್ ಸಿರ್ಪುರ್ಕರ್ ಆಯೋಗವು ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳ ಎನ್ಕೌಂಟರ್ ಕುರಿತು ವರದಿ ಸಲ್ಲಿಸಿದೆ. ಎನ್ಕೌಂಟರ್ ನಕಲಿ ಎಂದು ಆಯೋಗ ತಿಳಿಸಿದೆ. ಈ ಕುರಿತು 387 ಪುಟಗಳ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗಿದ್ದು, ಎನ್ಕೌಂಟರ್ಗೆ ಸಂಬಂಧಿಸಿದಂತೆ ಪೊಲೀಸರನ್ನು ತನಿಖೆಗೆ ಒಳಪಡಿಸಬೇಕು ಎಂದು ಆಯೋಗವು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
10 ಪೊಲೀಸ್ ಅಧಿಕಾರಿಗಳ ವಿಚಾರಣೆ ನಡೆಸಬೇಕು ಎಂದು ಆಯೋಗ ವರದಿಯಲ್ಲಿ ತಿಳಿಸಿದ್ದು, ಅವರೆಂದರೆ ವಿ.ಸುರೇಂದರ್, ಕೆ ನರಸಿಂಹ ರೆಡ್ಡಿ, ಶೇಖ್ ಲಾಲ್ ಮಾಧರ್, ಮೊಹಮ್ಮದ್ ಸಿರಾಜುದ್ದೀನ್, ಕೊಚೆರ್ಲಾ ರವಿ, ಕೆ ವೆಂಕಟೇಶ್ವರಲು, ಎಸ್ ಅರವಿಂದ್ ಗೌಡ್, ಜಾನಕಿರಾಮ್, ಆರ್ ಬಾಲು ರಾಠೋಡ್ ಮತ್ತು ಡಿ ಶ್ರೀಕಾಂತ್.
ಇನ್ನೊಂದು ಕಡೆ ದಿಶಾ ಆರೋಪಿಗಳ ಎನ್ಕೌಂಟರ್ ಪ್ರಕರಣವನ್ನು ಸುಪ್ರೀಂಕೋರ್ಟ್ ತೆಲಂಗಾಣ ಹೈಕೋರ್ಟ್ಗೆ ವರ್ಗಾಯಿಸಿದೆ. ಸರ್ಕಾರ ಮತ್ತು ಅರ್ಜಿದಾರರು ತಮ್ಮ ವಾದವನ್ನು ಹೈಕೋರ್ಟ್ನಲ್ಲಿ ಆಲಿಸಬೇಕು ಎಂದು ಅದು ಸೂಚಿಸಿದೆ. ಸಿರ್ಪುರ್ಕರ್ ಆಯೋಗದ ವರದಿಯನ್ನು ತೆಲಂಗಾಣ ಸರ್ಕಾರ ಮತ್ತು ಅರ್ಜಿದಾರರಿಗೆ ನೀಡಲಾಗುವುದು. ಈ ಪ್ರಕರಣದಲ್ಲಿ ಕ್ರಮಗಳನ್ನು ಹೈಕೋರ್ಟ್ ನಿರ್ಧರಿಸುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ಪ್ರಕರಣವನ್ನು ನಾವು ವಿಶೇಷವಾಗಿ ಮೇಲ್ವಿಚಾರಣೆ ಮಾಡಲು ಸಾಧ್ಯವಾಗಲಿಲ್ಲ. ಹೈಕೋರ್ಟ್ ಮತ್ತು ಕೆಳ ನ್ಯಾಯಾಲಯಗಳಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆ ತಿಳಿದಿಲ್ಲ. ಸಿರ್ಪುರ್ಕರ್ ಆಯೋಗದ ವರದಿಯನ್ನು ಹೈಕೋರ್ಟ್ಗೆ ನೀಡಲಾಗುವುದು. ವರದಿಯನ್ನು ಗಮನಿಸದೇ ವಿಚಾರಣೆ ನಡೆಸಲು ಸಾಧ್ಯವಿಲ್ಲ. ತೆಲಂಗಾಣ ಸರ್ಕಾರದ ಜತೆ ಮಾತನಾಡಿ ಅಲ್ಲಿನ ವಕೀಲರು ಬರಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಇದನ್ನೂ ಓದಿ: ಶಿವಮೊಗ್ಗ: ಕೆರೆ ನಡುಗಡ್ಡೆಯಲ್ಲಿ ಸಿಲುಕಿದ್ದ 13 ಕುದುರೆಗಳ ರಕ್ಷಣೆ