ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಉತ್ತುಂಗದಲ್ಲಿದ್ದಾಗ, ಜನರಿಗೆ ಔಷಧ ಮತ್ತು ಆಮ್ಲಜನಕ ನೀಡಿರುವ ಯೂತ್ ಕಾಂಗ್ರೆಸ್ ಅಧ್ಯಕ್ಷ ದೆಹಲಿ ಪೊಲೀಸರಿಂದ ಪ್ರಶ್ನೆಗೊಳಗಾಗಿದ್ದಾರೆ. ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ದೆಹಲಿ ಪೊಲೀಸರು ಬಿ.ವಿ ಶ್ರೀನಿವಾಸ್ ಅವರನ್ನ ಪ್ರಶ್ನಿಸಿದ್ದಾರೆ.
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶ್ರೀನಿವಾಸ್ ಅವರು ಸಾವಿರ ಸದಸ್ಯರ ತಂಡದೊಂದಿಗೆ ದೇಶಾದ್ಯಂತ ಕೋವಿಡ್ ಸೋಂಕಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಹಾಸಿಗೆ, ಆಕ್ಸಿಜನ್, ಔಷಧ ಸೇರಿದಂತೆ ಅನೇಕ ರೀತಿಯಲ್ಲಿ ಸಹಾಯ ಮಾಡ್ತಿದ್ದು, ಇದಕ್ಕೆ ಆನ್ಲೈನ್ಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಶ್ನೆ ಮಾಡಲು ಕಾರಣ?
ದೆಹಲಿ ಪೊಲೀಸರ ಪ್ರಕಾರ, ಕೋವಿಡ್-19ಗೆ ಸಂಬಂಧಿಸಿದ ಔಷಧಗಳನ್ನ ಅನೇಕ ನಾಯಕರು ಆಸ್ಪತ್ರೆಗಳಿಗೆ ವಿತರಿಸಿದ್ದಾರೆಂದು ಡಾ.ದೀಪಕ್ ಸಿಂಗ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕಷ್ಟದ ಸಮಯದಲ್ಲಿ ಜನರು ಔಷಧ ಪಡೆಯದಿದ್ದಾಗ, ಅದು ನಾಯಕರ ಕೈಗೆ ಹೇಗೆ ತಲುಪಿತು. ಹೈಕೋರ್ಟ್ನಲ್ಲಿ ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗಿತ್ತು.
ಇದನ್ನೂ ಓದಿ: ಸ್ಪುಟ್ನಿಕ್ ಲಸಿಕೆ ಮೊದಲ ಡೋಸ್ ಪಡೆದಿದ್ದು ಯಾರು ಗೊತ್ತಾ?
ಅರ್ಜಿ ಮೇರೆಗೆ ದೆಹಲಿ ಹೈಕೋರ್ಟ್ ಪೊಲೀಸರಿಗೆ ಇಡೀ ವಿಷಯದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿತು. ಹೀಗಾಗಿ ಯೂತ್ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಅವರನ್ನ ಪ್ರಶ್ನೆ ಮಾಡಲಾಗಿದೆ. ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರ ಹೇಳಿಕೆಯನ್ನೂ ಶೀಘ್ರದಲ್ಲೇ ದಾಖಲಿಸಲಾಗುವುದು ಎಂದು ತಿಳಿದು ಬಂದಿದೆ.
ಇದೇ ವಿಚಾರವಾಗಿ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ನಮ್ಮ ಮುಖಂಡರಿಗೆ ಬಲವಂತವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದೆ. ಟ್ವೀಟ್ ಮಾಡಿರುವ ರಂದೀಪ್ ಸುರ್ಜೇವಾಲ್, ಜನರಿಗೆ ಸಹಾಯ ಮಾಡುತ್ತಿರುವ ಕಾಂಗ್ರೆಸ್ ಮುಖಂಡರ ಮೇಲೆ ಈ ರೀತಿಯ ಕಿರುಕುಳ ಸರಿಯಲ್ಲ ಎಂದಿದ್ದಾರೆ.