ಲಖನೌ, ಉತ್ತರಪ್ರದೇಶ: ಶನಿವಾರ ತಡರಾತ್ರಿ ಸ್ನೇಹಿತರೊಬ್ಬರ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಇಂಟರ್ ವಿದ್ಯಾರ್ಥಿಯನ್ನು ಇಬ್ಬರು ಸ್ನೇಹಿತರು ಒಂದು ಸಾವಿರ ರೂಪಾಯಿ ವಿವಾದದಲ್ಲಿ 12 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಇಲ್ಲಿನ ಗೋಮ್ತಿ ನಗರ ಪ್ರದೇಶದಲ್ಲಿ ನಡೆದಿದೆ. ಮೃತನನ್ನು 19 ವರ್ಷದ 12ನೇ ತರಗತಿಯ ವಿದ್ಯಾರ್ಥಿ ಆಕಾಶ್ ಕಶ್ಯಪ್ ಎಂದು ಗುರುತಿಸಲಾಗಿದೆ.
ಸ್ನೇಹಿತನ ಮನೆಗೆ ಪಾರ್ಟಿಗೆ ಹೋಗಿದ್ದ. ಅಲ್ಲಿ ಆತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಆಕಾಶ್ನನ್ನು ಅವನ ಸ್ನೇಹಿತರು ಲೋಹಿಯಾ ಆಸ್ಪತ್ರೆಗೆ ಕರೆದೊಯ್ದರು. ವಿದ್ಯಾರ್ಥಿಯ ಸ್ಥಿತಿ ಗಂಭೀರವಾದಾಗ ವೈದ್ಯರು ಕೆಜಿಎಂಯು ತೋಮಾ ಸೆಂಟರ್ಗೆ ಕಳುಹಿಸಿದ್ದಾರೆ. ಅಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಾಗಿತ್ತು. ಘಟನೆ ನಡೆಸಿದ ಆರೋಪಿಗಳಿಬ್ಬರೂ ತಲೆಮರೆಸಿಕೊಂಡಿದ್ದಾರೆ. ಹಂತಕರ ಬಂಧನಕ್ಕೆ ಮೂರು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ.
ಪ್ರಕರಣದ ವಿವರ: ಪೂರಿ ಮಾರಾಟಗಾರ ಜಗದೀಶ್ ಎಂಬುವರು ತಮ್ಮ ಕುಟುಂಬದೊಂದಿಗೆ ಗಾಜಿಪುರದ ಸಂಜಯ್ ಗಾಂಧಿಪುರಂ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ಮಗ ಆಕಾಶ್ ಕಶ್ಯಪ್ ಸೇಂಟ್ ಪೀಟರ್ಸ್ ಶಾಲೆಯಲ್ಲಿ 12 ನೇ ತರಗತಿ ವಿದ್ಯಾರ್ಥಿಯಾಗಿದ್ದನು. ತಂದೆ ಜಗದೀಶ್ ಹೇಳುವ ಪ್ರಕಾರ, ಶನಿವಾರ ರಾತ್ರಿ 10 ಗಂಟೆ ಸುಮಾರು ನಗರದಲ್ಲಿ ವಾಸವಿರುವ ಗೆಳೆಯ ಜೈ ಎಂಬಾತ ನಮ್ಮ ಮನೆಗೆ ಬಂದಿದ್ದಾನೆ. ಬಳಿಕ ಜೈ ನನ್ನ ಮಗ ಆಕಾಶ್ನನ್ನು ಅವನೀಶ್ ಎಂಬ ಯುವಕನ ಬರ್ತ್ಡೇ ಪಾರ್ಟಿಗೆ ಕರೆದುಕೊಂಡು ಹೋದರು. ಗೋಮ್ತಿ ನಗರದ ಜುಗೌಲಿ ರೈಲ್ವೇ ಕ್ರಾಸಿಂಗ್ ಬಳಿ ವಾಸಿಸುವ ಅವನೀಶ್ ತನ್ನ ನಾಲ್ವರು ಸ್ನೇಹಿತರನ್ನು ತನ್ನ ಬರ್ತ್ಡೇ ಪಾರ್ಟಿಗೆ ಆಹ್ವಾನಿಸಿದ್ದ.
ಈ ಪಾರ್ಟಿಯಲ್ಲಿ ಆಕಾಶ್, ಅಭಯ್, ಅವನೀಶ್ ಸೇರಿದಂತೆ ನಾಲ್ವರು ಭಾಗವಹಿಸಿದ್ದರು. ಪಾರ್ಟಿಯ ಮಧ್ಯೆ ಆಕಾಶ್ ಬಳಿ ಅಭಯ್ ಒಂದು ಸಾವಿರ ರೂಪಾಯಿ ಕೇಳಿದ್ದಾನೆ. ಇದೇ ಹಣಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಪಾರ್ಟಿಯ ನಡುವೆಯೇ ಸ್ನೇಹಿತರು ವಿಷಯವನ್ನು ಸಮಾಧಾನಪಡಿಸಿದರು.
ಆದರೆ ಸ್ವಲ್ಪ ಸಮಯದ ನಂತರ ಅಭಯ್ ಇದ್ದಕ್ಕಿದ್ದಂತೆ ಚಾಕು ತೆಗೆದುಕೊಂಡು ಆಕಾಶ್ ಮೇಲೆ ಹಲವಾರು ಬಾರಿ ಹಲ್ಲೆ ನಡೆಸಿದ್ದಾನೆ. ಇದರಿಂದ ಆಕಾಶ್ ಗಂಭೀರವಾಗಿ ಗಾಯಗೊಂಡಿದ್ದನು. ಬಳಿಕ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕಾಶ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು.
ಮಗನಿಗೆ ಬೈಕ್ ಗಿಫ್ಟ್: ನಮ್ಮ ಕುಟುಂಬದಲ್ಲಿ ಪತ್ನಿ ರಾಧಾದೇವಿ, ಮಕ್ಕಳಾದ ವಿಕಾಸ್ ಮತ್ತು ಲಕ್ಕಿ ಇದ್ದಾರೆ ಎಂದು ತಂದೆ ಜಗದೀಶ್ ತಿಳಿಸಿದ್ದಾರೆ. ಆಕಾಶ್ ಕಿರಿಯವನಾಗಿದ್ದನು, ಅವನ ಜನ್ಮದಿನವು ಮುಂಬರುವ ಜೂನ್ 24 ರಂದು ಇತ್ತು. ಈ ಆತನಿಗೆ ಬೈಕ್ ಗಿಫ್ಟ್ ಕೊಡಿಸುವುದಾಗಿ ತಂದೆ ಭರವಸೆ ನೀಡಿದ್ದರು. ಆದರೆ, ಹುಟ್ಟುಹಬ್ಬಕ್ಕೂ ಮುನ್ನ ಆಕಾಶ್ ನಮ್ಮೆಲ್ಲರನ್ನು ಬಿಟ್ಟು ಹೋದ ಎಂದು ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿತ್ತು.
12ನೇ ತರಗತಿ ವಿದ್ಯಾರ್ಥಿಯ ಹತ್ಯೆ ಪ್ರಕರಣದಲ್ಲಿ ಎಡಿಸಿಪಿ ಸೈಯದ್ ಅಲಿ ಅಬ್ಬಾಸ್ ಮಾತನಾಡಿ, ಘಟನೆಯ ಬಗ್ಗೆ ಪಿಸಿಆರ್ಗೆ ಭಾನುವಾರ ಬೆಳಗ್ಗೆ 6 ಗಂಟೆಗೆ ಮಾಹಿತಿ ಬಂದಿತ್ತು. ನಮ್ಮ ತಂಡ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಇದಾದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತಂದೆ ಜಗದೀಶ್ ಅವರ ದೂರಿನ ಆಧಾರದ ಮೇಲೆ ಅಭಯ್ ಪ್ರತಾಪ್ ಸಿಂಗ್ ಮತ್ತು ದೇವಾಂಶ್ ವಿರುದ್ಧ ಕೊಲೆಯ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಅಭಯ ಪ್ರತಾಪ್ ಸಿಂಗ್ ಸ್ಥಳದಿಂದ ಪರಾರಿಯಾಗಿದ್ದಾನೆ. ನಮ್ಮ ಪೊಲೀಸ್ ತಂಡ ಅಭಯ್ ಹುಡುಕಾಟದಲ್ಲಿ ತೊಡಗಿದೆ. ಆರೋಪಿಯ ಸ್ಥಳವನ್ನು ಲಖಿಂಪುರ ಖೇರಿಯಲ್ಲಿ ಪತ್ತೆ ಹಚ್ಚಲಾಗಿದೆ. ಅದರ ಆಧಾರದ ಮೇಲೆ ತಂಡ ದಾಳಿ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.
ಓದಿ: Shivamogga crime: ಎಕ್ಸಿಕ್ಯೂಟಿವ್ ಇಂಜಿನಿಯರ್ ಪತ್ನಿ ಅನುಮಾನಾಸ್ಪದ ಸಾವು