ವಾರಾಣಾಸಿ: ಇಲ್ಲಿನ ಗಂಗಾನದಿಯಲ್ಲಿ ಬೋಟ್ ಮಗುಚಿದ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ. ಇಂದು ಬೆಳಗ್ಗೆ ಇಲ್ಲಿನ ದಶಶ್ವಮೇಧ ಘಾಟ್ನಲ್ಲಿ 34 ಮಂದಿ ಆಂಧ್ರಪ್ರದೇಶದ ಭಕ್ತಾದಿಗಳು ನದಿಯಲ್ಲಿ ಪ್ರಯಾಣ ಮಾಡುವಾಗ ಬೋಟ್ ಮಗುಚಿಕೊಂಡಿದೆ. ಎಲ್ಲಾ ಯಾತ್ರಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೋಣಿ ಮಗುಚಿಕೊಂಡ ತಕ್ಷಣ ಈಜುಪಟುಗಳು ತಕ್ಷಣಕ್ಕೆ ನೀರಿಗೆ ಹಾರಿ ಭಕ್ತಾದಿಗಳ ಪ್ರಾಣ ಉಳಿಸಿದ್ದಾರೆ. ವಿಷಯ ತಿಳಿದು ಸ್ಥಳೀಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಬಂದಿದ್ದು, ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದರು. 34 ಯಾತ್ರಿಕರು ಎಪಿಯ ಪೂರ್ವ ಗೋದಾವರಿಯಿಂದ ಬಂದಿದ್ದರು. ನದಿಯಿಂದ ರಕ್ಷಿಸಲ್ಪಟ್ಟ ನಂತರ ಇಬ್ಬರು ಯಾತ್ರಾರ್ಥಿಗಳು ಅಸ್ವಸ್ಥರಾಗಿದ್ದು, ಅವರನ್ನು ಕಬೀರಚೌರಾದ ವಿಭಾಗೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ದೋಣಿ ನದಿಯ ಮಧ್ಯಭಾಗಕ್ಕೆ ತಲುಪಿದಾಗ ದೋಣಿ ಒಳಗೆ ನೀರು ಬರುತ್ತಿರುವುದನ್ನು ಗಮನಿಸಿದ ಯಾತ್ರಿಕರೊಬ್ಬರು ಎಲ್ಲರನ್ನು ಎಚ್ಚರಿಸಿದ್ದಾರೆ. ಈ ವೇಳೆ ಯಾತ್ರಿಕರು ಗಾಬರಿಗೊಂಡಿದ್ದು, ಕೆಲವರು ನದಿಗೆ ಹಾರಿದ್ದಾರೆ. ಇವರನ್ನು ಈಜುಪಟುಗಳು ರಕ್ಷಿಸಿದ್ದಾರೆ.
ದಶಾಶ್ವಮೇಧ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ದೋಣಿ ಹಳೆಯದಾಗಿದ್ದು, ಬಿರುಕು ಬಿಟ್ಟ ಕಾರಣ ನೀರು ಒಳಗೆ ಬಂದಿದೆ. ನೀರು ಒಳಗೆ ಬಂದಾಗ ದೋಣಿ ಮುಳಗಿದೆ. ದೋಣಿ ಮುಳುಗುತ್ತಿದ್ದಂತೆ ಬೋಟ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ನದಿಯಲ್ಲಿ ತೇಲಿಬಂದ 'ಗಂಗೆ'.. ಜನರಿಂದ 15 ದಿನದ ಹೆಣ್ಣು ಮಗುವಿನ ರಕ್ಷಣೆ