ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಮೊಘಲ್ ರಾಜರುಗಳ ಹೆಸರಿನ ರಸ್ತೆಗಳಿಗೆ ಮರುನಾಮಕರಣ ಮಾಡುವಂತೆ ಬಿಜೆಪಿ ಆಗ್ರಹಿಸಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ದೆಹಲಿ ಘಟಕದ ಮುಖ್ಯಸ್ಥ ಆದೇಶ್ ಗುಪ್ತಾ, 'ಮೊಘಲ್ ಕಾಲದ ರಸ್ತೆಗಳ ಹೆಸರುಗಳನ್ನು ಕೂಡಲೇ ಬದಲಿಸಬೇಕು. ಈ ರಸ್ತೆಗಳಿಗೆ ಉತ್ತರ ದೆಹಲಿ ಕಾರ್ಪೋರೇಷನ್ ಭಾರತೀಯ ಮಹನೀಯರ ಹೆಸರುಗಳನ್ನಿಡಬೇಕು' ಎಂದು ಒತ್ತಾಯಿಸಿದ್ದಾರೆ. ತುಘಲಕ್ ರಸ್ತೆಯನ್ನು ಗುರು ಗೋವಿಂದ್ ಸಿಂಗ್ ರಸ್ತೆಯೆಂದು, ಅಕ್ಬರ್ ರಸ್ತೆಯನ್ನು ಮಹರಾಣಾ ಪ್ರತಾಪ್ ರಸ್ತೆಯೆಂದು, ಔರಂಬಾಜೇಬ್ ಲೇನ್ ಅನ್ನು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ರಸ್ತೆಯೆಂದು ಹಾಗು ಶಹಜಾನ್ ರಸ್ತೆಯನ್ನು ಬಿಪಿನ್ ರಾವತ್ ರಸ್ತೆಯೆಂದು ಹೆಸರಿಡುವಂತೆ ಅವರು ಪಾಲಿಕೆಗೆ ಪತ್ರ ಬರೆದಿದ್ದಾರೆ.
ಆದೇಶ್ ಗುಪ್ತಾ ಪ್ರತಿಕ್ರಿಯಿಸಿ, 'ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಡಿದ ಪಾಪದ ಕೆಲಸಗಳ ಪೈಕಿ ಕೆಲವನ್ನು ನರೇಂದ್ರ ಮೋದಿ ಸರ್ಕಾರ ಸರಿಪಡಿಸಿದೆ. ಇನ್ನೂ ಕೆಲವು ಹಾಗೆಯೇ ಉಳಿದಿವೆ. ಅದು ಕೂಡಾ ಬದಲಾಗಬೇಕು. ಭಾರತದ ಮೇಲೆ ಆಕ್ರಮಣ ಮಾಡಿರುವ ವಿದೇಶಿಗರ ಹೆಸರುಗಳನ್ನು ಈ ರಸ್ತೆಗಳಿಗೆ ಇಡಲಾಗಿದೆ. ಇದು ಸರಿಯಲ್ಲ. ಭಾರತೀಯರ ಹೆಸರುಗಳನ್ನೇಕೆ ಈ ರಸ್ತೆಗಳಿಗೆ ಇಡಬಾರದು?'. ದೆಹಲಿಯ ರಸ್ತೆಗಳನ್ನು ಮೊಘಲ್ ರಾಜರುಗಳ ಹೆಸರಿನಲ್ಲಿ ಕರೆಯುವುದು ಗುಲಾಮಗಿರಿಯ ಸಂಕೇತ. ದೇಶವು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಿಸುವ ಈ ಹೊತ್ತಿನಲ್ಲಿ ಆಕ್ರಮಣ ಮಾಡಿರುವ ಇಂಥವರ ಹೆಸರುಗಳು ಗುಲಾಮಗಿರಿಯ ಸಂಕೇತದಂತೆ ತೋರುತ್ತವೆ. ಈ ಹಿನ್ನೆಲೆಯಲ್ಲಿ ಇಂಥ ಹೆಸರುಗಳನ್ನು ತಕ್ಷಣವೇ ತೆಗೆಯಬೇಕು' ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ವರ್ಗಾವಣೆ ಆದ್ರೂ ಕರ್ತವ್ಯಕ್ಕೆ ಬಾರದ 38 ಇನ್ಸ್ಪೆಕ್ಟರ್ಸ್; ಡಿಜಿ ಕಚೇರಿಯಿಂದ ಎಚ್ಚರಿಕೆ ನೋಟಿಸ್