ಮುಂಬೈ: ದೇಶದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡಲು ಕಾರಣವಾದ ದೆಹಲಿಯ ತಬ್ಲಿಘಿ ಧಾರ್ಮಿಕ ಸಭೆ ನಡೆಸಲು ಅನುಮತಿ ನೀಡಿದವರು ಯಾರು ಎಂದು ಎನ್ಸಿಪಿ ನಾಯಕ ಶರದ್ ಪವಾರ್ ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದ ಎರಡು ಬೃಹತ್ ಸಮಾವೇಶಗಳಿಗೆ ಇಲ್ಲಿನ ಸರ್ಕಾರ ಅನುಮತಿ ನೀಡಲಿಲ್ಲ. ಮುಂಬೈನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಸಮಾವೇಶಕ್ಕೆ ಬಹಳ ಮೊದಲೇ ಅನುಮತಿ ನೀಡಲಾಗದು ಎಂದು ತಿಳಿಸಲಾಗಿತ್ತು. ಸೊಲ್ಲಾಪುರದಲ್ಲಿ ಸಮಾವೇಶ ನಡೆಸಲು ಮುಂದಾಗಿದ್ದ ಆಯೋಜಕರ ವಿರುದ್ಧ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮಹಾರಾಷ್ಟ್ರ ಸರ್ಕಾರ ಇಂಥದೊಂದು ನಿರ್ಧಾರ ಕೈಗೊಳ್ಳಬಹುದಾದರೆ ದೆಹಲಿಯಲ್ಲಿ ನಡೆದ ಸಮಾವೇಶವನ್ನು ತಡೆಯಲಿಲ್ಲವೇಕೆ? ಅಲ್ಲಿ ಸಮಾವೇಶ ನಡೆಸಲು ಅನುಮತಿ ನೀಡಿದವರು ಯಾರು? ಎಂದು ಪವಾರ್ ಪ್ರಶ್ನಿಸಿದರು.
"ಮಾಧ್ಯಮಗಳು ತಬ್ಲಿಘಿ ಸಮಾವೇಶದ ಬಗ್ಗೆ ಅತಿ ರಂಜಿತವಾಗಿ ವರದಿ ಮಾಡುವ ಅಗತ್ಯವೇನಿದೆ? ಒಂದು ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡಲಾಗುತ್ತಿದೆ." ಎಂದು ಪವಾರ್ ಇದೇ ಸಂದರ್ಭದಲ್ಲಿ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.