ಭೋಪಾಲ್: ಮಧ್ಯಪ್ರದೇಶದ ಮೂರು ರಾಜ್ಯಸಭಾ ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ ಚಲಾಯಿಸಿದರು.
ದಿಗ್ವಿಜಯ್ ಸಿಂಗ್, ಪ್ರಭಾತ್ ಝಾ ಮತ್ತು ಸತ್ಯನಾರಾಯಣ ಜಟಿಯ ಅವರ ಅವಧಿ ಏಪ್ರಿಲ್ 9 ಕ್ಕೆ ಕೊನೆಗೊಂಡ ಹಿನ್ನೆಲೆ ಈ ಮೂರು ಸ್ಥಾನಗಳು ಖಾಲಿ ಇದ್ದು, ಈ ಸ್ಥಾನಗಳಿಗೆ ಮತ್ತೆ ಚುನಾವಣೆ ನಡೆಯುತ್ತಿದೆ. ರಾಜ್ಯಸಭಾ ಚುನಾವಣೆಯಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ಸುಮೇರ್ ಸಿಂಗ್ ಸೋಲಂಕಿ ಅವರು ಬಿಜೆಪಿಯ ಅಭ್ಯರ್ಥಿಗಳಾಗಿದ್ದಾರೆ . ಇದೇ ವೇಳೆ, ಕಾಂಗ್ರೆಸ್ ನಿಂದ, ದಿಗ್ವಿಜಯ್ ಸಿಂಗ್ ಮತ್ತು ಫೂಲ್ ಸಿಂಗ್ ಅವರು ಚುನಾವಣಾ ಕಣದಲ್ಲಿದ್ದಾರೆ. ಪ್ರಸ್ತುತ ವಿಧಾನಸಭೆಯಲ್ಲಿರುವ 206 ಶಾಸಕರು ಇಂದು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ತಮ್ಮ ಮತ ಚಲಾಯಿಸಲಿದ್ದಾರೆ. ಸಂಜೆ 5 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ.
ಮಧ್ಯಪ್ರದೇಶ ವಿಧಾನಸಭೆಯಲ್ಲಿ 230 ಸ್ಥಾನಗಳಿವೆ. 24 ಸ್ಥಾನಗಳ ಖಾಲಿ ಇರುವ ಕಾರಣ, ಉಳಿದ ಸದಸ್ಯರ ಸಂಖ್ಯೆ ಪ್ರಸ್ತುತ 206 ಆಗಿದೆ. ಇದರಲ್ಲಿ ಬಿಜೆಪಿಗೆ 107, ಕಾಂಗ್ರೆಸ್ 92 ಶಾಸಕರು, ಬಿಎಸ್ಪಿಯ ಇಬ್ಬರು, ಎಸ್ಪಿಯ ಒಬ್ಬರು ಮತ್ತು ನಾಲ್ವರು ಸ್ವತಂತ್ರ ಶಾಸಕರು ಇದ್ದಾರೆ. ಸದಸ್ಯರ ಸಂಖ್ಯೆಯ ಪ್ರಕಾರ, ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಒಂದು ಸ್ಥಾನ ಪಡೆದರೆ ಮೂರನೇ ಸ್ಥಾನದ ಸ್ಪರ್ಧೆ ಹೆಚ್ಚು ಆಸಕ್ತಿದಾಯಕ ಎಂದು ಪರಿಗಣಿಸಲಾಗಿದೆ.
ಇತ್ತ ಕೋವಿಡ್-19 ಬಿಕ್ಕಟ್ಟು ಹಿನ್ನೆಲೆ ಎಲ್ಲಾ ಮತದಾನ ಕೇಂದ್ರಗಳನ್ನು ಈಗಾಗಲೇ ಸ್ಯಾನಿಟೈಸಿಂಗ್ ಮಾಡಲಾಗಿದೆ. ಎಲ್ಲಾ ಶಾಸಕರನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಲಾಗಿದ್ದು, ಎಲ್ಲರ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಲಾಗಿದೆ.