ಚೆನ್ನೈ: ತನಗೆ ಎದುರಾದ ಜಾತಿ, ಆರ್ಥಿಕ ಸಮಸ್ಯೆಯ ತಡೆಗೋಡೆಗಳನ್ನು ಮುರಿದ ತಮಿಳುನಾಡಿನ ವಾಲ್ಪಾರೈ ಬಳಿಯ ಬುಡಕಟ್ಟು ಜನಾಂಗದ ಹುಡುಗಿಯೊಬ್ಬಳು ಕೇರಳದಲ್ಲಿ ನಡೆದ 10 ನೇ ತರಗತಿಯ ಸಾರ್ವತ್ರಿಕ ಪರೀಕ್ಷೆಯಲ್ಲಿ 'ಎ' ಗ್ರೇಡ್ ಪಡೆದು ಮಾದರಿಯಾಗಿದ್ದಾಳೆ.
ಈ ಬಗ್ಗೆ ಮಾತನಾಡಿದ ಶ್ರೀದೇವಿ, ನಾನು ತುಂಬಾ ಸಂತೋಷವಾಗಿದ್ದೇನೆ. ವೈದ್ಯೆಯಾಗಬೇಕು ಮತ್ತು ಜನರಿಗೆ ಸೇವೆ ಸಲ್ಲಿಸಬೇಕು ಎಂಬುದು ನನ್ನ ಗುರಿಯಾಗಿದೆ. ನಮ್ಮ ಬುಡಕಟ್ಟು ಸಮುದಾಯಗಳ ಮಕ್ಕಳು ಶಿಕ್ಷಣವನ್ನು ಮುಂದುವರಿಸಬೇಕೆಂದು ನಾನು ಬಯಸುತ್ತೇನೆ. ಇದರಿಂದ ಮಾತ್ರ ನಮ್ಮ ಜನಾಂಗದ ಸಬಲೀಕರಣ ಸಾಧ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕೇರಳದಲ್ಲಿ 10 ನೇ ತರಗತಿಯ ಪರೀಕ್ಷೆಯಲ್ಲಿ ತಮ್ಮ ಬುಡಕಟ್ಟಿನ ಹುಡುಗಿಯೊಬ್ಬಳು ಅಗ್ರಸ್ಥಾನ ಪಡೆದಿದ್ದಾಳೆಂದು ತಿಳಿದ ತರುವಾಯ ಕರುಮತ್ತಿಯ ಜನರು ಸಂತೋಷಗೊಂಡಿದ್ದಾರೆ. ಅಣ್ಣಮಲೈ ಟೈಗರ್ ರಿಸರ್ವ್ (ಎಟಿಆರ್) ಬಳಿಯಿರುವ ಕರುಮಟ್ಟಿ ಎಂಬ ಗ್ರಾಮವು ಸುಮಾರು 65 ಕುಟುಂಬಗಳನ್ನು ಒಳಗೊಂಡಿದೆ.
ತಮ್ಮ ಮಗಳ ಸಾಧನೆಯಿಂದ ಸಂತೋಷಗೊಂಡ ಚೆಲ್ಲಮುತ್ತು, ನಾವು ಮುದುವಾರ್ ಸಮುದಾಯದವರು. ನಮ್ಮ ಪೋಷಕರಿಗೆ ಶಿಕ್ಷಣದ ಮಹತ್ವದ ಬಗ್ಗೆ ತಿಳಿದಿರಲಿಲ್ಲ. ನಮ್ಮ ಪೀಳಿಗೆಯು ಶಾಲೆಯ ಆವರಣವನ್ನೇ ಪ್ರವೇಶಿಸಿಲ್ಲ. ನಾನೊಬ್ಬ ಅಶಿಕ್ಷಿತನಾಗಿದ್ದರೂ, ನನ್ನ ಮಕ್ಕಳಿಗೆ ಶಿಕ್ಷಣ ನೀಡಲು ನಾನು ದೃಢ ನಿಶ್ಚಯ ಮಾಡಿದ್ದೇನೆ. ಅವಳು ಉನ್ನತ ವ್ಯಾಸಂಗವನ್ನು ಮುಂದುವರಿಸಬೇಕು ಮತ್ತು ಅವಳ ಕನಸುಗಳು ನೆರವೇರಲಿ ಎಂದು ಹಾರೈಸಿದರು.

ಹೇಗಿದೆ ಇವರ ಬದುಕು ?: ಕರುಮುಟ್ಟಿಯಲ್ಲಿ ಸುಮಾರು 45 ಶಾಲೆಗೆ ಹೋಗುವ ಮಕ್ಕಳಿದ್ದಾರೆ. ಇದು ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿಯಿಂದ ವಾಲ್ಪಾರೈ ಬಳಿಯ ಹುಲಿ ಮೀಸಲು ಪ್ರದೇಶದಲ್ಲಿರುವ 36 ಆಂತರಿಕ ಕುಗ್ರಾಮಗಳಲ್ಲಿ ಒಂದಾಗಿದೆ. ಬುಡಕಟ್ಟು ಸಮುದಾಯಗಳಾದ ಕಡರ್, ಮುದುವಾರ್, ಮಲಸರ್, ಮಲೈ ಮಲಸರ್ ಮತ್ತು ಐರಾವಲಾರ್ ಸಮುದಾಯದ ಜನ ಪಶ್ಚಿಮ ಘಟ್ಟದೊಳಗಿನ ಈ ಕುಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ.
ಶಿಕ್ಷಣ, ಸರಕುಗಳನ್ನು ಖರೀದಿಸುವುದು ಮತ್ತು ಆರೋಗ್ಯ ಸೌಲಭ್ಯಗಳನ್ನು ಪಡೆಯುವುದು ಸೇರಿದಂತೆ ಮೂಲಭೂತ ಅಗತ್ಯಗಳಿಗಾಗಿ ಅವರು ಗುಡ್ಡಗಾಡು ಪ್ರದೇಶದಿಂದ ನಗರ ಪ್ರದೇಶಕ್ಕೆ ಬರಬೇಕು. ಇಂತಹ ಕಷ್ಡದ ಪರಿಸ್ಥಿತಿಯಲ್ಲಿಯೂ ವಿದ್ಯಾಭ್ಯಾಸ ಮಾಡುವ ಬಯಕೆ ಆಕೆಯನ್ನು ಕೇರಳದ ಚಲಕುಡಿಗೆ ಕರೆದೊಯ್ಯಿತು. ಅಷ್ಟೇ ಅಲ್ಲದೇ ತಮ್ಮ ಸಾಧನೆ ಮಾಡಲು ಅವರು ತಮ್ಮ ಮೂಲ ನಿವಾಸದಿಂದ 100 ಕಿಮೀ ಅಂತರದಲ್ಲಿ ವ್ಯಾಸಂಗ ಮಾಡಿದ್ದಾರೆ ಎಂಬುದು ಗಮನಾರ್ಹವಾದುದು.

ಲಾಕ್ಡೌನ್ ನಡುವೆ ಸಾಧನೆಗೈದ ವಿದ್ಯಾರ್ಥಿನಿ: ಇಷ್ಟೆಲ್ಲಾ ಕಷ್ಟಗಳ ನಡುವೆ ವ್ಯಾಸಂಗ ಮಾಡುತ್ತಿದ್ದ ಶ್ರೀದೇವಿ ತನ್ನ ಪರೀಕ್ಷಾ ದಿನಗಳಲ್ಲಿ ಕೊರೊನಾ ಮಹಾಮಾರಿಯ ಕರಿನೆರಳಿಗೂ ಸೆಡ್ಡು ಹೊಡೆದು ನಿಲ್ಲಬೇಕಾಯಿತು. ಅಲ್ಲದೇ ಈ ವೇಳೆ ಲಾಕ್ಡೌನ್ ಜಾರಿಯಾದ್ದರಿಂದ ತನ್ನ ಪರೀಕ್ಷೆಗಳಿಗೆ ಹಾಜರಾಗಲು ತನ್ನ ದೂರದ ಸಂಬಂಧಿಕರೊಂದಿಗೆ ವಾಸವಿರಬೇಕಾಯಿತು. ಅದೃಷ್ಟವಶಾತ್ ಸಂಬಂಧಿಕರ ಮನೆಯಲ್ಲಿ ಸಿಲುಕಿಕೊಂಡಿದ್ದ ಇವಳನ್ನು ಗುರುತಿಸಿದ ಕೇರಳ ಸರ್ಕಾರಿ ಅಧಿಕಾರಿಗಳು ವಾಹನವನ್ನು ವ್ಯವಸ್ಥೆಗೊಳಿಸಿ ಪರೀಕ್ಷೆಗೆ ಅನುವು ಮಾಡಿಕೊಟ್ಟರು.
ಬುಡಕಟ್ಟು ವಿದ್ಯಾರ್ಥಿನಿಯ ಸಾಧನೆ ಕಂಡ ಎಟಿಆರ್ ಅಧಿಕಾರಿಗಳು ಶುಭಾಶಯ ಕೋರಿದ್ದಾರೆ. ಹಾಗೆಯೇ ಈಕೆಯ ಸಾಧನೆಯನ್ನು ಗುರುತಿಸಿ ಉಪ ಕ್ಷೇತ್ರ ನಿರ್ದೇಶಕ ಅರೋಕಿಯಾರಾಜ್ ಕ್ಸೇವಿಯರ್ ಶಾಲು ಮತ್ತು ಉಡುಗೊರೆಗಳನ್ನು ನೀಡಿ ಸನ್ಮಾನಿಸಿದರು.