ನವದೆಹಲಿ: ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ನೆರವು ನೀಡುತ್ತಿದ್ದಾರೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಗರ ಮತ್ತು ನವದೆಹಲಿಯ 9 ಸ್ಥಳಗಳಲ್ಲಿ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ, ಸತತ ಎರಡನೇ ದಿನವೂ ಶೋಧ ಮುಂದುವರಿಸಿದೆ.
ಎನ್ಐಎ ಅಧಿಕಾರಿಗಳು ಬುಧವಾರ ಶ್ರೀನಗರ ಮತ್ತು ಬಂಡಿಪೋರಾದ 10 ಸ್ಥಳಗಳಲ್ಲಿ ಮತ್ತು ಬೆಂಗಳೂರಿನ ಒಂದು ಸ್ಥಳದಲ್ಲಿ ಶೋಧ ನಡೆಸಿದ್ದರು. ಕೆಲವು ಸರ್ಕಾರೇತರ ಸಂಸ್ಥೆಗಳು (ಎನ್ಜಿಒ)ಗಳು ಮತ್ತು ಟ್ರಸ್ಟ್ಗಳು ಭಾರತ ಮತ್ತು ವಿದೇಶಗಳಿಂದ ದತ್ತಿ ಚಟುವಟಿಕೆಗಳ ಹೆಸರಿನಲ್ಲಿ ಹಣ ಸಂಗ್ರಹಿಸಿ, ದೇಶದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ನಡೆಸಲು ಆ ಹಣ ಬಳಸುತ್ತಿವೆ ಎಂಬ ಗಂಭೀರ ಆರೋಪ ಎದುರಿಸುತ್ತಿವೆ.
ತನಿಖೆಯ ವೇಳೆ ಹಲವಾರು ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.