ನವದೆಹಲಿ: ಜಿಎಸ್ಟಿ ಪದ್ಧತಿಯಡಿ ತೆರಿಗೆ ವಂಚಿಸುವವರನ್ನು ಬಂಧಿಸುವ ತೆರಿಗೆ ಅಧಿಕಾರಿಗಳ ಅಧಿಕಾರವನ್ನು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್ಟಿ) ಅಡಿಯಲ್ಲಿ ತೆರಿಗೆ ವಂಚಕರನ್ನು ಬಂಧಿಸುವ ಟ್ಯಾಕ್ಸ್ ಅಧಿಕಾರಿಗಳ ಅಧಿಕಾರವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.
ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಹಾಗೂ ನ್ಯಾಯಮೂರ್ತಿ ಅನಿರುದ್ಧ ಬೋಸ್ ಅವರಿದ್ದ ನ್ಯಾಯ ಪೀಠ, ಕೇಂದ್ರ ಸರ್ಕಾರಕ್ಕೆ ವಿವರಣೆ ಕೋರಿ ನೋಟಿಸ್ ಜಾರಿಗೊಳಿಸಿದೆ.
ಜಿಎಸ್ಟಿ ವಂಚಕರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವುದಕ್ಕೆ ಸಂಬಂಧಿಸಿದ ನಾನಾ ಹೈಕೋರ್ಟ್ಗಳು ವಿಭಿನ್ನ ದೃಷ್ಟಿಕೋನವನ್ನು ಹೊಂದಿವೆ. ಆದರಿಂದ ಈ ಕುರಿತು ಪ್ರಶ್ನೆಯನ್ನು ಇತ್ಯರ್ಥಪಡಿಸಬೇಕಾದ ಅಗತ್ಯ ಇದೆ ಎಂದು ಪೀಠವು ತಿಳಿಸಿದೆ.
ಜಿಎಸ್ಟಿ ವಂಚನೆ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡುವುದಕ್ಕೆ ಸಂಬಂಧಿಸಿದಂತೆ ತನ್ನ ಈ ಹಿಂದಿನ ಆದೇಶವನ್ನು ಪರಿಗಣಿಸುವಂತೆ ಎಲ್ಲ ಹೈಕೋರ್ಟ್ಗಳಿಗೆ ಸುಪ್ರೀಂಕೋರ್ಟ್ ಹೇಳಿದೆ.