ನವದೆಹಲಿ: ಉದ್ಯೋಗಗಳಲ್ಲಿ ಮೀಸಲಾತಿ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಅನುಕೂಲವಾಗುವಂತೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡವನ್ನು ಮತ್ತಷ್ಟು ಉಪ-ವರ್ಗೀಕರಿಸುವ ಅಧಿಕಾರ ರಾಜ್ಯಗಳಿಗೆ ಇಲ್ಲ ಎಂಬ ತನ್ನ 2004ರ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪಂಚ ಸದಸದ್ಯರ ಪೀಠವು, ಇ ವಿ ಚಿನ್ನಯ್ಯ ಸಾಂವಿಧಾನಿಕ ಪೀಠದ 2004ರ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಪುನರುಚ್ಛರಿಸಿದೆ. ಅಲ್ಲದೇ ಈ ತೀರ್ಪಿನ ಮರುಪರಿಶೀಲನೆ ಹಾಗೂ ಈ ಕುರಿತ ಸೂಕ್ತ ನಿರ್ದೇಶನಕ್ಕಾಗಿ ಇದನ್ನು ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಎಸ್ ಎ ಬೋಬ್ಡೆ ಅವರ ಮುಂದೆ ಇಡಬೇಕು ಎಂದು ಪ್ರತಿಪಾದಿಸಿದೆ.
ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ವಿನೀತ್ ಸರನ್, ಎಂ ಆರ್ ಶಾ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ನ್ಯಾಯಪೀಠವು, 2004 ರ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದೆ. ಎಸ್ಸಿ ಹಾಗೂ ಎಸ್ಟಿಗಳಲ್ಲಿ ಜಾತಿಯನ್ನು ಉಪವರ್ಗೀಕರಣಗೊಳಿಸುವ ಮೂಲಕ ರಾಜ್ಯಗಳು ಆದ್ಯತೆಯ ಮೇರೆಗೆ ಕಾನೂನುಗಳನ್ನು ಮಾಡಬಹುದು ಎಂದು ಪಂಚಸದಸ್ಯ ಪೀಠ ವ್ಯಾಖ್ಯಾನಿಸಿದೆ.
ಹೀಗಾಗಿ ಶೀಘ್ರದಲ್ಲೇ 2004 ರ ತೀರ್ಪು ಉನ್ನತ ನ್ಯಾಯಾಲಯದಲ್ಲಿ ಮರುಪರಿಶೀಲನೆಗೊಳ್ಳಲಿದೆ. ಅಲ್ಲದೇ ಈ ಬಗ್ಗೆ ಕಾನೂನು ರೂಪಿಸಲು ರಾಜ್ಯ ಸರ್ಕಾರಗಳಿಗೂ ಹಕ್ಕನ್ನು ನೀಡುವ ಸಾಧ್ಯತೆಯೂ ಇದೆ.