ನವದೆಹಲಿ: ಅಂತರ್ಜಾತಿ ವಿವಾಹವಾಗಿದ್ದ ಜೈಪುರ ಮೂಲದ ನವ ದಂಪತಿ ವಿರುದ್ಧ ಯಾವುದೇ ಕ್ರಮಕೈಗೊಳ್ಳಬೇಡಿ. ಅವರಿಗೆ ರಕ್ಷಣೆ ನೀಡಿ ಎಂದು ರಾಜಸ್ಥಾನ, ದೆಹಲಿ ಹಾಗೂ ಉತ್ತರ ಪ್ರದೇಶ ಪೊಲೀಸರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಫೆ.28ರಂದು ಮದುವೆಯಾದ ಈ ದಂಪತಿಗೆ ಯುವತಿಯ ಕುಟುಂಬದ ಕಡೆಯಿಂದ ಬೆದರಿಕೆಯಿದೆ. ತಮ್ಮ ಜೀವಕ್ಕೆ ಅಪಾಯವಿದೆ. ತಮಗೆ ರಕ್ಷಣೆ ನೀಡಿ ಎಂದು ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ರಾಜಸ್ಥಾನ ಹಾಗೂ ಉತ್ತರ ಪ್ರದೇಶ ಪೊಲೀಸರು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರಿಂದ ನಮಗೆ ರಕ್ಷಣೆ ಕೊಡಿಸಿ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಇಂದು ಈ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾ. ಅಶೋಕ್ ಭೂಷಣ್ ಹಾಗೂ ನ್ಯಾ.ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠವು, ಇವರಿಬ್ಬರೂ ವಯಸ್ಕರಾಗಿದ್ದು, ಪರಸ್ಪರ ಒಪ್ಪಿ ಮದುವೆಯಾಗಿದ್ದಾರೆ. ಮಾರ್ಚ್ 2ರಂದು ತಮ್ಮ ಮದುವೆಯನ್ನು ರಿಜಿಸ್ಟರ್ ಮಾಡಿಕೊಂಡಿದ್ದಾರೆ.
ಯುವತಿಯ ಕುಟುಂಬದ ಕಡೆಯಿಂದ ಇವರಿಗೆ ಬೆದರಿಕೆಯಿದೆ. ಅರ್ಜಿದಾರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ. ಅಗತ್ಯವಿದ್ದರೆ ಅವರಿಗೆ ರಕ್ಷಣೆ ನೀಡಿ ಎಂದು ದೆಹಲಿ ಪೊಲೀಸ್ ಆಯುಕ್ತರು, ಉತ್ತರಪ್ರದೇಶ ಮತ್ತು ರಾಜಸ್ಥಾನದ ಪೊಲೀಸ್ ಮಹಾನಿರ್ದೇಶಕರಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.