ಪೂರ್ವ ಗೋದಾವರಿ (ಆಂಧ್ರ ಪ್ರದೇಶ): ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ.
ಮಾರೆಡುಮಿಲ್ಲಿ-ಚಿಂತೂರ್ ಘಾಟಿ ರಸ್ತೆಯ ವಾಲ್ಮೀಕಿ ಬೆಟ್ಟಕ್ಕೆ ಟೆಂಪೋ ಟ್ರಾವೆಲರ್ ಅಪ್ಪಳಿಸಿ ಬಸ್ ಕಣಿವೆಗೆ ಬಿದ್ದಿದೆ. ಪರಿಣಾಮ 6 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅಸುನೀಗಿದ್ದಾರೆ. ಈವರೆಗೂ ಒಟ್ಟು ಏಳು ಜನ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭಿಸಿದೆ.
ಪ್ರವಾಸಿ ಬಸ್ನಲ್ಲಿ ಹೋಗಿದ್ದವರು ಚಿತ್ರದುರ್ಗ ಮೂಲದವರೆಂದು ತಿಳಿದುಬಂದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಹೊರಟಿದ್ದ ಬಸ್, ಭದ್ರಾಚಲಂನಿಂದ ರಾಜಮಂಡ್ರಿಗೆ ಹೋಗುವ ಮಾರ್ಗ ಮಧ್ಯದ ಮಾರೆಡುಮಿಲ್ಲಿ-ಚಿಂತೂರ್ ಘಾಟಿ ರಸ್ತೆಯ ವಾಲ್ಮೀಕಿ ಬೆಟ್ಟದ ಬಳಿ ಕಣಿವೆಗೆ ಉರುಳಿದೆ.
ಟೆಂಪೋ ಟ್ರಾವೆಲರ್ನಲ್ಲಿ ಒಟ್ಟು 24 ಜನ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಇದರಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನುಳಿದವರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.