ಪಾಟ್ನಾ: ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ರಾಷ್ಟ್ರೀಯ ಜನತಾದಳ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯಲ್ಲಿ ನಿರುದ್ಯೋಗ ಸಮಸ್ಯೆಗೆ ಆದ್ಯತೆ ನೀಡಿದೆ. ಮಹಾಮೈತ್ರಿಯ ಸಿಎಂ ಅಭ್ಯರ್ಥಿ, ಹಾಗು ಲಾಲೂಪ್ರಸಾದ್ ಯಾದವ್ ಅವರ ಪುತ್ರ, ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಅವರು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ರಾಜ್ಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ, ಕೃಷಿ ಸಾಲ ಮನ್ನಾ, ಶಿಕ್ಷಣಕ್ಕೆ ಶೇ.22 ರಷ್ಟು ಬಜೆಟ್-ಖರ್ಚು ಮತ್ತು ನಿರುದ್ಯೋಗಿಗಳಿಗೆ 1,500 ರೂ. ನೆರವು ಕುರಿತು ಭರವಸೆ ನೀಡಿದ್ದಾರೆ.
ಪ್ರಣಾಳಿಕೆಯ ಪ್ರಮುಖ ಅಂಶಗಳು:
- 'ಸಮಾನ ಕೆಲಸ ಸಮಾನ ವೇತನ' ವಾಗ್ದಾನ
- ಎಲ್ಲಾ ಗುತ್ತಿಗೆ ನೌಕರರನ್ನು ಉಳಿಸಿಕೊಳ್ಳುವ ಭರವಸೆ
- ಎಲ್ಲ ಕ್ಷೇತ್ರಗಳಲ್ಲೂ ಖಾಸಗೀಕರಣ ಕೊನೆಗೊಳಿಸುವ ಭರವಸೆ
- ಎಲ್ಲಾ ನೀರಾವರಿ ಪಂಪ್ಗಳನ್ನು ಸೌರ ಪಂಪ್ಗಳಾಗಿ ಪರಿವರ್ತಿಸುವುದು
- ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ, ಕ್ರೀಡಾಂಗಣಗಳ ನಿರ್ಮಾಣ
- ಸರ್ಕಾರಿ ನೌಕರರಿಗೆ ಹಿಂದಿನ ಪಿಂಚಣಿ ವ್ಯವಸ್ಥೆ ಜಾರಿ
- ತೊಗರಿ ಉದ್ಯಮ ವಾಣಿಜ್ಯೀಕರಣ
- ವಿಶೇಷ ಆರ್ಥಿಕ ವಲಯ ಸ್ಥಾಪನೆ
- ವಿದ್ಯುತ್ ದರ ಕಡಿಮೆ ಮಾಡುವುದು
- ಕೃಷಿ ಸಾಲ ಮನ್ನಾ
ಕಾಂಗ್ರೆಸ್, ಸಿಪಿಐ, ಸಿಪಿಎಂ ರಾಷ್ಟ್ರೀಯ ಜನತಾದಳ (ಆರ್ಜೆಡಿ) ನೇತೃತ್ವದಲ್ಲಿ ಮಹಾಮೈತ್ರಿಯ ಭಾಗವಾಗಿದೆ. ಎನ್ಡಿಎ ಮೈತ್ರಿಕೂಟದಲ್ಲಿ ಲೋಕ ಜನಶಕ್ತಿ ಪಕ್ಷ (ಎಲ್ಜೆಪಿ) ಬಿಜೆಪಿ ಸ್ಪರ್ಧಿಸಲಿರುವ ಸ್ಥಾನಗಳಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ಅದು ಜನತಾದಳ (ಯುನೈಟೆಡ್) ವಿರುದ್ಧ ಹೋರಾಡಲಿದೆ. ಜೆಡಿಯು ಮತ್ತು ಎಲ್ಜೆಪಿ ಎರಡೂ ಬಿಜೆಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿಯಲ್ಲಿವೆ.