ನವದೆಹಲಿ: ಮಹಾಮಾರಿ ಕೊರೊನಾ ಈಗಾಗಲೇ ಭಾರತದಲ್ಲಿ ಐವರ ಜೀವ ಪಡೆದುಕೊಂಡಿದ್ದು, ಅನೇಕರು ಸೋಂಕಿನಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದೀಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ರಾಷ್ಟ್ರಪತಿ ಭವನದ ಮೂಲಗಳು ಮಾಹಿತಿ ನೀಡಿವೆ.
ಇಂದು ಕೊರೊನಾ ಪರೀಕ್ಷೆಗೆ ಅವರು ಒಳಗಾಗಲಿದ್ದು, ತಮ್ಮ ಎಲ್ಲ ಕಾರ್ಯಕ್ರಮ ಮುಂದೂಡಿಕೆ ಮಾಡಿದ್ದಾರೆ. ಬಾಲಿವುಡ್ ಸಿಂಗ್ ಕನಿಕಾ ಕಪೂರ್ ಭಾಗಿಯಾಗಿದ್ದ ಪಾರ್ಟಿಯಲ್ಲಿ ಬಿಜೆಪಿ ಸಂಸದ ದುಷ್ಯಂತ್ ಸಿಂಗ್ ಕೂಡ ಭಾಗವಹಿಸಿದ್ದರು. ಇದಾದ ಬಳಿಕ ಬಿಜೆಪಿ ಸಂಸದ ರಾಷ್ಟ್ರಪತಿ ಅವರನ್ನ ಭೇಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ತಪಾಸಣೆಗೆ ಒಳಗಾಗಲಿದ್ದಾರೆ.
ಕೊರೊನಾ ವೈರಸ್ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಈಗಾಗಲೇ ಕೆಲವೊಂದು ಮಹತ್ವದ ಸೂಚನೆ ನೀಡಿದ್ದು, ಅವುಗಳನ್ನ ಪಾಲನೆ ಮಾಡಲು ರಾಷ್ಟ್ರಪತಿಗಳು ಕೂಡ ಮುಂದಾಗಿದ್ದಾರೆ. ಹೀಗಾಗಿ ಮುಂದಿನ ಆದೇಶದವರೆಗೆ ತಮ್ಮ ಕಾರ್ಯಕ್ರಮ ಮುಂದೂಡಿಕೆ ಮಾಡಿ ಆದೇಶ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.