ಭುಜ್ (ಗುಜರಾತ್ ): ಮೇ 12 ರಂದು ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದಲ್ಲಿ ಭುಜ್ ಭೂಕಂಪದ ಬಗ್ಗೆ ಪ್ರಸ್ತಾಪಿಸಿದ್ದರು, ಆ ಬಳಿಕ ಪ್ರಧಾನಿಯವರ ಹಳೆಯ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಭುಜ್ ಭೂಕಂಪದ ಸಂದರ್ಭದಲ್ಲಿ ಪ್ರಧಾನಿ ಮೋದಿ ಗುಜರಾತ್ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆ ವೇಳೆ ಅವರನ್ನು ಬೈಕ್ನಲ್ಲಿ ಕುಳ್ಳಿರಿಸಿಕೊಂಡು ಭೂಕಂಪದಿಂದ ಹಾನಿಗೊಳಗಾಗಿದ್ದ ಭುಜ್ನ ಪಡೇಶ್ವರ ಚೌಕ್ ಬಳಿಯ ಮಹಾಳೇಶ್ವರ ಪ್ರದೇಶದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿದ ಫೋಟೋವನ್ನು ಮೋದಿಯವರ ಆಗಿನ ಸಹವರ್ತಿ ಪಂಕಜ್ ಲಾಲ್ ಎಂಬವರು ಬಿಡುಗಡೆ ಮಾಡಿದ್ದು, ಆ ಪೋಟೋ ಈಗ ಎಲ್ಲೆಡೆ ಹರಿದಾಡುತ್ತಿದೆ.
ಮೇ 12ರಂದು ಮಾಡಿದ್ದ ಭಾಷಣದಲ್ಲಿ ಆತ್ಮನಿರ್ಭರ ಭಾರತ ಅಭಿಯಾನ ಘೋಷಿಸಿದ ಪ್ರಧಾನಿ, ಕೊರೊನಾವನ್ನು ಸಮರ್ಥವಾಗಿ ಎದುರಿಸಿ ಸ್ವಾವಲಂಭಿ ಭಾರತ ಕಟ್ಟುವ ಬಗ್ಗೆ ಮಾತನಾಡಿದ್ದರು. ಈ ವೇಳೆ ಉದಾಹರಣೆಯಾಗಿ ಭುಜ್ ಜಿಲ್ಲೆ ಭೂಕಂಪದ ಬಳಿಕ ಹೇಗೆ ಮತ್ತೆ ಎದ್ದು ಬಂದಿತು ಎಂಬುವುದನ್ನು ಪ್ರಸ್ತಾಪಿಸಿದ್ದರು.
2001 ರಲ್ಲಿ ದೊಡ್ಡ ಮಟ್ಟದ ಭೂಕಂಪಕ್ಕೆ ಒಳಗಾಗಿದ್ದ ಭುಜ್ ಬಳಿಕ ಸ್ವಾಲಂಭಿಯಾಗಿ ಎದ್ದು ಬಂದಿತ್ತು. ಅಲ್ಲದೆ ಇತರ ಜಿಲ್ಲೆಗಳಿಗಿಂತ ವೇಗದಲ್ಲಿ ಅಭಿವೃದ್ದಿಯಾಗಿತ್ತು.