ನವದೆಹಲಿ: ಶಿಕ್ಷಣವು ವಿದ್ಯಾರ್ಥಿಗಳ ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ಸಕಾರಾತ್ಮಕವಾಗಿ ಸಂಪರ್ಕ ಹೊಂದಿದಾಗ ಅವರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, "ಹೊಸ ಯುಗದ ಕಲಿಕೆ"ಗಾಗಿ ಐದು ತತ್ವಗಳನ್ನು ಕೂಡಾ ಅವರು ನೀಡಿದ್ದಾರೆ.
ತೊಡಗುವಿಕೆ, ಅನ್ವೇಷಣೆ, ಅನುಭವ, ಅಭಿವ್ಯಕ್ತಿ ಹಾಗೂ ಶ್ರೇಷ್ಠತೆ ಎಂಬ 5 ತತ್ವಗಳನ್ನು ಪ್ರಧಾನಿ ನೀಡಿದ್ದು, ಈ ಸಂದರ್ಭದಲ್ಲಿ ಅವರು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) - 2020ರ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತು ನೀಡಿದರು.
ಪ್ರಧಾನಿ ಮೋದಿ, ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್, ರಾಜ್ಯ ಸಚಿವ (ಎಂಒಎಸ್) ಸಂಜಯ್ ಧೋತ್ರೆ ಸೇರಿದಂತೆ ವಿವಿಧ ರಾಜ್ಯಗಳ ಪ್ರತಿನಿಧಿಗಳು ರಾಷ್ಟ್ರೀಯ ಶಿಕ್ಷಣ ನೀತಿ -2020ರ (21 ನೇ ಶತಮಾನದಲ್ಲಿ ಶಾಲಾ ಶಿಕ್ಷಣ) ಕುರಿತು ನಡೆದ ಸಮಾವೇಶದಲ್ಲಿ ಭಾಗವಹಿಸಿದರು.
"ಹೊಸ ಯುಗದ ಕಲಿಕೆಗೆ ಆಧಾರವಾಗಿರುವ ಸುಲಭ ಮತ್ತು ಹೊಸ ತಂತ್ರಗಳನ್ನು ನಾವು ಉತ್ತೇಜಿಸಬೇಕು. ಪಠ್ಯಕ್ರಮವನ್ನು ಕಡಿಮೆ ಮಾಡಿ, ಮೂಲಭೂತ ವಿಷಯಗಳತ್ತ ಗಮನ ಹರಿಸಬಹುದು" ಎಂದು ಪ್ರಧಾನಿ ಹೇಳಿದರು.
ವಿದ್ಯಾರ್ಥಿಗಳಲ್ಲಿ "ಗಣಿತದ ಚಿಂತನೆ ಮತ್ತು ವೈಜ್ಞಾನಿಕ ಮನೋಧರ್ಮ" ವನ್ನು ಬೆಳೆಸುವ ಅಗತ್ಯವನ್ನು ಪ್ರಧಾನಿ ಒತ್ತಿಹೇಳಿದರು.
ಎನ್ಇಪಿ -2020 ತಯಾರಿಕೆಯ ಸುದೀರ್ಘ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಮುಂಬರುವ ದಿನಗಳಲ್ಲಿ ಪರಿಣಾಮಕಾರಿ ಅನುಷ್ಠಾನದಿಂದ ಅದರ ಯಶಸ್ಸನ್ನು ನಿರ್ಧರಿಸಲಾಗುತ್ತದೆ ಎಂದು ಅವರು ಹೇಳಿದರು.