ರಾಜ್ಕೋಟ್(ಗುಜರಾತ್): ರಾಜ್ಯಸಭಾ ಚುನಾವಣೆಗೆ ಮುನ್ನ ಕೆಲ ಪಕ್ಷಗಳ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂಬ ವರದಿ ಕುರಿತಂತೆ ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಕಿಡಿಕಾರಿದ್ದಾರೆ. ಅಂತಹ ಶಾಸಕರಿಗೆ ಜನರೇ ತಕ್ಕ ಶಾಸ್ತಿ ಮಾಡಬೇಕೆಂದು ಹೇಳಿದ್ದಾರೆ.
'ಕಳೆದ ಒಂದು ತಿಂಗಳಲ್ಲಿ ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದೆ. 140 ರಿಂದ 150 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಈ ಹಣವನ್ನು ವೆಂಟಿಲೇಟರ್ಗಳನ್ನು ಖರೀದಿಸಲು ಖರ್ಚು ಮಾಡಿದ್ದರೆ ಕೊರೊನಾದಿಂದ ಸಾವನ್ನಪ್ಪುತ್ತಿರುವವರಲ್ಲಿ ಕೆಲವರನ್ನು ಉಳಿಸಬಹುದಿತ್ತು. ಜನಸಾಮಾನ್ಯರಿಗೆ ಮೋಸ ಮಾಡಿದ ಶಾಸಕರು ಹಣದ ದುರಾಸೆಯಿಂದ ಅಲ್ಲಿಗೆ ಹೋಗಿದ್ದಾರೆ' ಎಂದು ಹಾರ್ದಿಕ್ ಆರೋಪಿಸಿದ್ದಾರೆ.
ಚುನಾವಣೆಗೆ ಮುಂಚಿತವಾಗಿ ಅವರು ಯಾಕೆ ರಾಜೀನಾಮೆ ನೀಡುತ್ತಿದ್ದಾರೆ? ಎಲ್ಲವನ್ನೂ ತಿಳಿದಿದ್ದರೂ ಚುನಾವಣಾ ಆಯೋಗವೂ ಮೌನವಾಗಿದೆ. ರಾಜ್ಯಸಭೆಯಲ್ಲಿ ಬಿಜೆಪಿ ಬಹುಮತ ಪಡೆಯಲು ಪ್ರಯತ್ನಿಸುತ್ತಿದೆ. ಗುಜರಾತ್ನಲ್ಲಿ ಕಾಂಗ್ರೆಸ್ ಎರಡು ರಾಜ್ಯಸಭಾ ಸ್ಥಾನಗಳನ್ನು ಖಚಿತವಾಗಿ ಗೆಲ್ಲಲಿದೆ ಎಂದಿದ್ದಾರೆ.
ಜೂನ್ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಮೂವರು ಶಾಸಕರು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ತನ್ನ ಶಾಸಕರನ್ನು ಗುಜರಾತ್ ಮತ್ತು ರಾಜಸ್ಥಾನದ ವಿವಿಧ ರೆಸಾರ್ಟ್ಗಳಿಗೆ ಸ್ಥಳಾಂತರಿಸಿದೆ.