ನವದೆಹಲಿ: ಸರ್ಕಾರಿ ಅಧಿಕಾರಿಯನ್ನು ಸಾರ್ವಜನಿಕವಾಗಿ ಬ್ಯಾಟ್ನಿಂದ ಥಳಿಸಿದ ಬಿಜೆಪಿ ಶಾಸಕ ಆಕಾಶ್ ವಿಜಯ್ವರ್ಗಿಯಾ ವಿರುದ್ಧ ಪ್ರಧಾನಿ ಮೋದಿ ಗರಂ ಆಗಿದ್ದಾರೆ.
ವಿಜಯ್ ವರ್ತನೆ ಕುರಿತಾಗಿ ಅಸಮಾಧಾನ ಹೊರಹಾಕಿರುವ ಮೋದಿ, ಇಂತಹ ವ್ಯಕ್ತಿಗಳನ್ನು ಪಕ್ಷದಿಂದ ಉಚ್ಛಾಟಿಸಬೇಕು. ಈ ವರ್ತನೆಯನ್ನು ಪಕ್ಷ ಸಹಿಸುವುದಿಲ್ಲ. ರಾಜಕಾರಣಿಯ ಮಗನಾದ ಮಾತ್ರಕ್ಕೆ ಮನಸ್ಸಿಗೆ ಬಂದಂತೆ ನಡೆದುಕೊಳ್ಳುವುದು ಖಂಡನೀಯ ಎಂದು ಇಂದು ನಡೆದ ಪಕ್ಷದ ಸಂಸದೀಯ ಸಭೆಯಲ್ಲಿ ಆಕ್ರೋಶದಿಂದ ಹೇಳಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತಾಗಿ ಪ್ರಧಾನಿಯೇ ಕಿಡಿ ಕಾರಿರುವುದರಿಂದ ಪಕ್ಷವು, ಆಕಾಶ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಿದೆ ಎಂದು ಹೇಳಲಾಗ್ತಿದೆ.
ಕಳೆದ ಬುಧವಾರ ಸಾರ್ವಜನಿಕವಾಗಿ ಸರ್ಕಾರಿ ಅಧಿಕಾರಿ ಮೇಲೆ ಆಕಾಶ್ ಬ್ಯಾಟ್ನಿಂದ ಹಲ್ಲೆ ನಡೆಸಿದ್ದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದರಿಂದ ಅವರನ್ನು ಬಂಧಿಸಲಾಗಿತ್ತು. ಎರಡು ದಿನಗಳ ಹಿಂದೆಯಷ್ಟೇ ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ. ತಮ್ಮ ವರ್ತನೆ ಬಗ್ಗೆ ಪಾಪಪ್ರಜ್ಞೆ ಇಲ್ಲವೆಂದೂ ಹೇಳಿಕೊಂಡಿದ್ದಾರೆ.