ಕಾಂಕೆರ್: ಕೊರೊನಾ ವೈರಸ್ ವಿರುದ್ಧ ಹೋರಾಡಲು ಛತ್ತೀಸ್ಗಡದ ಬುಡಕಟ್ಟು ಜನರು ಸನ್ನದ್ಧರಾಗಿದ್ದು, ಇದಕ್ಕಾಗಿ ಅವರು ಸಾಲ್ ಮರದ ಎಲೆಗಳನ್ನು ಬಳಸಿ ಮಾಸ್ಕ್ ತಯಾರಿಸಿದ್ದಾರೆ.
ಆಮಾಬೆಡಾ ಪ್ರದೇಶದ ಭಾರ್ರಿಟೋಲಾ ಗ್ರಾಮದ ಬುಡಕಟ್ಟು ಜನರು, ಕೊರೊನಾ ವೈರಸ್ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನೈಸರ್ಗಿಕ ವಸ್ತುಗಳನ್ನೇ ಬಳಸಿಕೊಳ್ಳುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಸಾಲ್ ಮರದ ಎಲೆಗಳಿಂದ ಮುಖವಾಡಗಳನ್ನು ತಯಾರಿಸಿದ್ದಾರೆ. ಜೊತೆಗೆ ಗ್ರಾಮಸ್ಥರು ಮನೆಯಿಂದ ಹೊರಬರುತ್ತಿಲ್ಲ.
ಈ ಪ್ರದೇಶದಲ್ಲಿ ಯಾವುದೇ ಮಾಸ್ಕ್ಗಳು ದೊರೆಯುತ್ತಿಲ್ಲ ಮತ್ತು ಕಾಂಕೆರ್ ನಗರಕ್ಕೆ ಹೋಗಲೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಗ್ರಾಮಸ್ಥರು ಸ್ಥಳೀಯವಾಗಿ ಸಿಗುವ ಮರದ ಎಲೆಗಳನ್ನೇ ಬಳಸಿಕೊಂಡು ಸುರಕ್ಷಿತವಾಗಿರಲು ಪ್ರಯತ್ನಿಸುತ್ತಿದ್ದಾರೆ.
ನಗರ ಪ್ರದೇಶಗಳಲ್ಲಿ ಜನರು ಈ ಸಾಂಕ್ರಾಮಿಕ ರೋಗದಿಂದ ತಪ್ಪಿಸಿಕೊಳ್ಳಲು ಹೊಸ ಮಾರ್ಗಗಳನ್ನು ಹುಡುಕುವಲ್ಲಿ ನಿರತರಾಗಿದ್ದಾರೆ. ಆದ್ರೆ ಈ ಬುಡಕಟ್ಟು ಜನರು ಸ್ಥಳೀಯ ಮುಖವಾಡ ಬಳಸಿ, ಕೈ ತೊಳೆಯುವುದು ಮತ್ತು ಪರಸ್ಪರ ದೂರವಿರುವುದರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ಗ್ರಾಮಕ್ಕೆ ಪಟ್ಟಣದಿಂದ ಬರುವವರು ಮೊದಲು ಆಸ್ಪತ್ರೆಗೆ ಹೋಗಿ, ಅಲ್ಲಿ ತಪಾಸಣೆ ಮಾಡಿಸಿಕೊಂಡೇ ಬರಬೇಕು. ಇಲ್ಲವಾದ್ರೆ ಗ್ರಾಮದೊಳಗೆ ಯಾರಿಗೂ ಪ್ರವೇಶ ಇರುವುದಿಲ್ಲ.