ನವದೆಹಲಿ: ಪಂಜಾಬ್ನಲ್ಲಿ ಪ್ರಧಾನಿ ಮೋದಿ ಪ್ರತಿಮೆ ದಹಿಸಿದ ಘಟನೆಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಖಂಡಿಸಿದ್ದಾರೆ. ನೆಹರೂ, ಗಾಂಧಿ ವಂಶಕ್ಕೆ ಎಂದಿಗೂ ಪ್ರಧಾನ ಮಂತ್ರಿ ಕಚೇರಿ ಮೇಲೆ ಗೌರವವಿಲ್ಲ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ದ್ವೇಷದ ರಾಜಕೀಯದಲ್ಲಿ ತೊಡಗಿದೆ. ಪಂಜಾಬ್ನಲ್ಲಿ ಪ್ರಧಾನಿ ಪ್ರತಿಕೃತಿ ದಹಿಸಿರೋದು ಅನಿರೀಕ್ಷಿತವಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿರ್ದೇಶನದ ಮೇರೆಗೆ ಈ ಘಟನೆ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.
2004 ರಿಂದ 2014 ರ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಮಂತ್ರಿಯ ಅಧಿಕಾರವನ್ನು ದುರ್ಬಲಗೊಳಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸಹ್ಯವರ್ತನೆ ತೋರುವ ಯಾವುದಾದರೊಂದು ಪಕ್ಷವಿದ್ದರೆ ಅದು ಕಾಂಗ್ರೆಸ್. ರಾಜಸ್ಥಾನದಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಪಂಜಾಬ್ನಲ್ಲಿ ಮಂತ್ರಿಗಳು ವಿದ್ಯಾರ್ಥಿ ವೇತನ ಹಗರಣಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ದಶಕಗಳಿಂದಲೂ ಕಾಂಗ್ರೆಸ್ಗೆ ಭಿನ್ನಾಭಿಪ್ರಾಯ ಧ್ವನಿಗಳ ಬಗ್ಗೆ ತಿರಸ್ಕಾರವಿದೆ. ತುರ್ತು ಸಮಯದಲ್ಲಿ ನಾವದನ್ನು ಕಂಡಿದ್ದೇವೆ. ರಾಜೀವ್ ಗಾಂಧಿ ಸರ್ಕಾರ ಪತ್ರಿಕಾ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಒಂದು ಲಜ್ಜೆಗೆಟ್ಟ ಪ್ರಯತ್ನ ಮಾಡಿತ್ತು ಎಂದು ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ವಿರೋಧಿಗಳಿಗೆ ತೊಂದರೆ ನೀಡುತ್ತಿದೆ. ಕಾಂಗ್ರೆಸ್ ಆಶೀರ್ವದಿಸಿದ ಮಹಾರಾಷ್ಟ್ರ ಸರ್ಕಾರ, ಆಡಳಿತ ಮಾಡುವುದನ್ನು ಬಿಟ್ಟು, ಉಳಿದೆಲ್ಲವನ್ನೂ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.
"ಬಡತನದಲ್ಲಿ ಜನಿಸಿ, ಪ್ರಧಾನ ಮಂತ್ರಿಯಾದ ವ್ಯಕ್ತಿಯ ವಿರುದ್ಧ ಒಂದು ರಾಜವಂಶದ ದ್ವೇಷ ಐತಿಹಾಸಿಕವಾಗಿದೆ. ಈ ದೇಶದ ಜನರ ಪ್ರೀತಿ ಮೋದಿಯವರ ಮೇಲಿರೋದು ಮತ್ತೊಂದು ಐತಿಹಾಸಿಕವಾಗಿದೆ. ಮೋದಿಯವರನ್ನು ಕಾಂಗ್ರೆಸ್ ಎಷ್ಟು ದ್ವೇಷಿಸುತ್ತೋ, ಜನರು ಅದಕ್ಕಿಂತ ದುಪ್ಟಟ್ಟು ಇಷ್ಟ ಪಡುತ್ತಾರೆ" ಎಂದು ವಿರೋಧಿಗಳಿಗೆ ಜೆ.ಪಿ. ನಡ್ಡಾ ತಿರುಗೇಟು ನೀಡಿದ್ದಾರೆ.