ನವದೆಹಲಿ : ನಗರದ ಏಮ್ಸ್ ಆಸ್ಪತ್ರೆಯಲ್ಲಿ 22 ವರ್ಷದ ಯುವಕನೋರ್ವ ಆಸ್ಪತ್ರೆಯ ಮೆಟ್ಟಲಿನ ಗ್ರಿಲ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ಬಿಹಾರದ ಗೋಪಾಲಗಂಜ್ ನಿವಾಸಿ ಬಿಟ್ಟು ಕುಮಾರ್ ತಿವಾರಿ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ 6.16 ಸಮಯದಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್)ನ ತುರ್ತು ವಾರ್ಡಿನ 2ನೇ ಮಹಡಿಯಲ್ಲಿರುವ ಮೆಟ್ಟಿಲಿನ ಗ್ರಿಲ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಟ್ಟು ಕುಮಾರ್ ತಿವಾರಿ, ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಬಳಲುತ್ತಿದ್ದ ಪರಿಣಾಮ ಚಿಕಿತ್ಸೆಗಾಗಿ ಮೇ 25 ರಂದು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಅತುಲ್ಕುಮಾರ್ ಠಾಕೂರ್ ತಿಳಿಸಿದ್ದಾರೆ.
ತಿವಾರಿ ಸಾವಿಗೆ ಸ್ಪಷ್ಟ ಕಾರಣಗಳು ತಿಳಿದು ಬಂದಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಮೃತ ತಿವಾರಿ ತಾಯಿ ಮತ್ತು ಸಹೋದರಿ ಈಗಾಗಲೇ ಆಸ್ಪತ್ರೆಯಲ್ಲಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.