ಹಥ್ರಾಸ್(ಉತ್ತರ ಪ್ರದೇಶ): ಹೊಲಿಗೆ ಮತ್ತು ಕಸೂತಿ ತರಬೇತಿ ನೀಡುವ ನೆಪದಲ್ಲಿ ದೆಹಲಿಗೆ ಕರೆದೊಯ್ಯುತ್ತಿದ್ದ ವ್ಯಕ್ತಿಯಿಂದ ಮಧ್ಯಪ್ರದೇಶದ 17 ವರ್ಷದ ಬಾಲಕಿ ತಪ್ಪಿಸಿಕೊಂಡಿದ್ದು, ಪೊಲೀಸರಿಂದ ಸಹಾಯ ಪಡೆಯುವ ಮುನ್ನ ತೀವ್ರ ಕಷ್ಟಪಟ್ಟಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯ ಡೊಂಗರ್ ಮೂಲದ ಈ ಹುಡುಗಿ ದೆಹಲಿಗೆ ಒಂದು ವಾರದ ಹಿಂದೆಯೇ ಒಬ್ಬ ವ್ಯಕ್ತಿಯೊಂದಿಗೆ ಪ್ರಯಾಣ ಪ್ರಾರಂಭಿಸಿದ್ದಾಳೆ. ಈಕೆಯೊಂದಿಗೆ ಇನ್ನೂ ಸುಮಾರು 11 ಹುಡುಗಿಯರು ಇದ್ದರು ಎನ್ನಲಾಗಿದೆ. ಆಕೆ ತರಬೇತಿ ಪಡೆಯುವುದಾಗಿ ನಂಬಿ ಹೊರಟಿದ್ದು, ಪೋಷಕರ ಅನುಮತಿ ಮೇರೆಗೆಯೇ ತೆರಳಿದ್ದಾಳೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಹೋಗುವ ಮಾರ್ಗ ಮಧ್ಯೆ ಎಲ್ಲಾ ಹುಡುಗಿಯರನ್ನು ಬಸ್ ನಿಲ್ದಾಣದ ಬಳಿ ಬಾಡಿಗೆ ಕೋಣೆಯಲ್ಲಿ ಇರಿಸಲಾಗಿತ್ತು. ಆಗ ಆ ವ್ಯಕ್ತಿಯ ನಡೆ -ನುಡಿ ಕಂಡ ಹುಡುಗಿ, ಆತನ ಉದ್ದೇಶದ ಬಗ್ಗೆ ಅನುಮಾನ ಬಂದ ಹಿನ್ನೆಲೆ ಆಕೆ ಹೇಗೋ ಅಲ್ಲಿಂದ ತಪ್ಪಿಸಿಕೊಂಡಿದ್ದಾಗಿ ತಿಳಿಸಿದ್ದಾಳೆ.
ಆನಂತರ ಅಲ್ಲಿಂದ ತಪ್ಪಿಸಿಕೊಂಡು ಎರಡು ದಿನ ಕಾಲ ನಡೆದು ಆಕೆ ಉತ್ತರಪ್ರದೇಶದ ಹಥ್ರಾಸ್ ತಲುಪಿದ್ದಾಳೆ. ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಆಕೆಯನ್ನು ಕಂಡ ಪೊಲೀಸರು ನಗರದ ಕೊಟ್ವಾಲಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ನಿಜ ಘಟನೆ ಬಯಲಿಗೆ ಬಂದಿದೆ.
ಆಕೆ ಇತರ ಹುಡುಗಿಯರೊಂದಿಗೆ ತಂಗಿದ್ದ ಸ್ಥಳದ ಹೆಸರು ನೆನಪಿಲ್ಲ ಎಂದು ತಿಳಿಸಿದ್ದಾಳೆ. ಬಾಲಕಿಯ ಹೇಳಿಕೆಯನ್ನು ನಗರ ವಲಯ ಅಧಿಕಾರಿ ದಾಖಲಿಸಿದ್ದು, ಆಕೆಯ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.
ವಿಚಾರಣೆಯ ನಂತರ ಈ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ತಿಳಿಸಿದ್ದಾರೆ.