ನವದೆಹಲಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಮದ್ಯದಂಗಡಿ ಬಂದ್ ಆಗಿ ಎಣ್ಣೆ ಪ್ರಿಯರು ತೊಂದರೆ ಅನುಭವಿಸುವಂತಾಗಿದೆ.
ಇದರ ಮಧ್ಯೆ ಮದ್ಯ ಲಭಿಸದೇ ಖಿನ್ನತೆಗೊಳಗಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಕೇರಳದಲ್ಲಿ ಹೆಚ್ಚಾಗಿದ್ದರಿಂದ ವೈದ್ಯರ ಚೀಟಿ ಇದ್ದರೆ, ಅವರ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡುವ ನಿರ್ಧಾರ ಅಲ್ಲಿನ ಸರ್ಕಾರ ಕೈಗೊಂಡಿತ್ತು. ಕೇರಳ ಸರ್ಕಾರದ ಈ ನಿರ್ಧಾರಕ್ಕೆ ಭಾರತೀಯ ವೈದ್ಯಕೀಯ ಸಂಘ ಟೀಕೆ ವ್ಯಕ್ತಪಡಿಸಿತ್ತು. ಜೊತೆಗೆ ಕೇರಳ ಸಿಎಂ ಅವರೊಂದಿಗೆ ಮಾತನಾಡುವುದಾಗಿ ಹೇಳಿತ್ತು.
ಇದೀಗ ಮದ್ಯ ಪೂರೈಕೆ ವಿಚಾರವನ್ನಿಟ್ಟುಕೊಂಡು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರದ ನಿರ್ಧಾರಕ್ಕೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಕೇರಳ ಸರ್ಕಾರದ ಈ ನಿರ್ಧಾರ ಪ್ರಶ್ನಿಸಿ ಶಾಸಕ ಟಿ.ಎನ್. ಪ್ರತಾಪನ್ ಕೋರ್ಟ್ ಮೆಟ್ಟಿಲೇರಿದ್ದರು. ಕೇರಳ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿದ ಬಳಿಕ ಹೈಕೋರ್ಟ್ ವಿಚಾರಣೆಯನ್ನು ಮೂರು ವಾರ ಮುಂದೂಡಿದೆ.