ಕಣ್ಣೂರು: ಕೇರಳ ಗಡ್ಡಧಾರಿ ಯುವಕರ ಗುಂಪೊಂದು ತಮ್ಮ ವಿಶಿಷ್ಟ ಕೆಲಸದ ಮೂಲಕ ಯುವಪೀಳಿಗೆ ಇತರರಿಗೆ ಸಹಾಯ ಮಾಡಲು ಸಾಮಾಜಿಕವಾಗಿ ಹೇಗೆ ಸಮರ್ಪಿತವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ.
'ಕೇರಳ ಬಿಯರ್ಡ್ ಸೊಸೈಟಿ' ಹಾಗೂ ಅದರ ಸಂಘಟಿತ ಗುಂಪುಗಳು ವೈದ್ಯಕೀಯ ನೆರವು, ಮನೆ ನಿರ್ಮಾಣ, ಆಸ್ಪತ್ರೆಗಳಿಗೆ ಸಲಕರಣೆಗಳು ಮತ್ತು ವೈದ್ಯಕೀಯ ಶಿಬಿರಗಳ ಆಯೋಜನೆ ಸೇರಿದಂತೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲೆಂದು 4 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದೆ. ಈಗಾಗಲೇ ಅನೇಕ ಕ್ಯಾನ್ಸರ್ ರೋಗಿಗಳಿಗೆ ಬಿಯರ್ಡ್ ಸೊಸೈಟಿ ಸಹಾಯಹಸ್ತ ಚಾಚಿದೆ.
'ನೋ ಶೇವ್ ನವೆಂಬರ್' ಅಭಿಯಾನದ ಅಂಗವಾಗಿ ಯುವ ಹೃದಯಗಳು ತಮ್ಮ ಶೇವಿಂಗ್ ಖರ್ಚಿನ ಹಣವನ್ನು ಉಳಿಸಿ, ಸಂಗ್ರಹಿಸಿವೆ. ಕೇರಳ ಬಿಯರ್ಡ್ ಸೊಸೈಟಿಯ ಮೂರನೇ ವಾರ್ಷಿಕೋತ್ಸವದ ಕಾರಣ, ಗುಂಪಿನ ಎಲ್ಲ ಸದಸ್ಯರು ಕಣ್ಣೂರಿನ ತಲಶೇರಿಯಲ್ಲಿ ಒಂದೆಡೆ ಸೇರಿ, ತಾವು ಸಂಗ್ರಹಿಸಿದ ಹಣವನ್ನು ಸೊಸೈಟಿಗೆ ಒಪ್ಪಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಚವಕ್ಕಾಡ್ ಬೀಚ್ನಲ್ಲಿ 60 ಜನ ಗಡ್ಡಧಾರಿ ಯುವಕರೊಂದಿಗೆ ಕೇರಳ ಬಿಯರ್ಡ್ ಸೊಸೈಟಿ ಪ್ರಾರಂಭವಾಗಿತ್ತು. ಇದೀಗ ಕೇರಳದ ಎಲ್ಲಾ ಜಿಲ್ಲೆಗಳಿಂದ ಸುಮಾರು 800 ಸದಸ್ಯರನ್ನು ಸೊಸೈಟಿ ಹೊಂದಿದೆ. ಅರ್ಜಿದಾರರು ಕನಿಷ್ಠ 21 ವರ್ಷ ವಯಸ್ಸಿನವರಾಗಿರಬೇಕು ಹಾಗೂ ಚಿಕ್ಕದಾಗಿ ಗಡ್ಡ ಹೊಂದಿರಬೇಕು. ಅವರ ಪ್ರೊಫೈಲ್ಗಳ ವಿವರ ನೋಡಿದ ಬಳಿಕ ಅರ್ಜಿದಾರರನ್ನು ಸೊಸೈಟಿಗೆ ಸೇರಿಸಿಕೊಳ್ಳಲಾಗುತ್ತದೆ. ಅರ್ಹರು ಪ್ರವೇಶ ಶುಲ್ಕವಾಗಿ 500 ರೂಪಾಯಿಗಳನ್ನು ಪಾವತಿಸಬೇಕಿದೆ.
ಗಡ್ಡ ಬಿಡುವುದು ಒಂದು ತಪ್ಪು ಜೀವನಶೈಲಿ ಮತ್ತು ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಜನರ ಮನಸ್ಸಿನಲ್ಲಿನಲ್ಲಿರುವ ಸಾಂಪ್ರದಾಯಿಕ ಆಲೋಚನೆಗಳನ್ನು ತೆಗೆದು ಹಾಕುವುದು ಬಿಯರ್ಡ್ ಸೊಸೈಟಿಯ ಉದ್ದೇಶವಾಗಿದೆ. ಮೊದಮೊದಲು ಇವರನ್ನು ನೋಡಿದ ಅನೇಕರು ಮದ್ಯವ್ಯಸನಿಗಳಂತೆ, ರೌಡಿಗಳಂತೆ ಕಾಣುತ್ತಿದ್ದರಂತೆ. ಆದರೆ ಈಗ ಇವರ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿದೆ.