ನವದೆಹಲಿ: ಜಾಮಿಯಾ ನಗರದಲ್ಲಿ ಗುರುವಾರ ನಡೆದ ಫೈರಿಂಗ್ನಲ್ಲಿ ಗಾಯಗೊಂಡಿರುವ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಿಂದ ಭರಿಸುವುದಾಗಿ ಉಪಕುಲಪತಿ ನಜ್ಮಾ ಅಖ್ತರ್ ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಾಮಿಯಾ ವಿವಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಇದ್ದಕ್ಕಿಂದ್ದಂತೆ ಕೈಯಲ್ಲಿ ಗನ್ ಹಿಡಿದುಕೊಂಡು ಬಂದಿದ್ದ ರಾಮಭಕ್ತ ಗೋಪಾಲ್ ಎಂಬ ಯುವಕ 'ತಗೋ ಸ್ವಾತಂತ್ರ್ಯ' ("Yeh lo aazadi") ಎಂದು ಘೋಷಣೆ ಕೂಗುತ್ತಾ ಪ್ರತಿಭಟನಾನಿರತರ ಮೇಲೆ ಫೈರಿಂಗ್ ನಡೆಸಿದ್ದ. ಘಟನೆಯಲ್ಲಿ ಶಾದಾಬ್ ಫಾರೂಕ್ ಎಂಬ ಸಮೂಹ ಸಂವಹನ ವಿದ್ಯಾರ್ಥಿಯೋರ್ವ ಗಾಯಗೊಂಡಿದ್ದು, ಆತನನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ರಾತ್ರಿ ಉಪಕುಲಪತಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಇದೊಂದು ಹೀನಾಯ ಕೃತ್ಯವಾಗಿದ್ದು, ಇದನ್ನು ನಾವು ಖಂಡಿಸುತ್ತೇವೆ. ಅಲ್ಲದೇ ಈ ವೇಳೆ ಮೌನವಾಗಿದ್ದ ಪೊಲೀಸರ ಕ್ರಮವನ್ನೂ ಖಂಡಿಸುತ್ತೇವೆ. ಇದು ದೆಹಲಿ ಪೊಲೀಸರ ಮೇಲೆ ನಮಗಿದ್ದ ನಂಬಿಕೆಯನ್ನೂ ಹುಸಿ ಮಾಡಿದೆ. ಇನ್ನು ಗಾಯಗೊಂಡಿರುವ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ವಿವಿ ಭರಿಸಲಿದೆ ಎಂದು ಹೇಳಿದ್ದಾರೆ.