ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದ ಲೇವಾದೇವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂಗೆ ಆಗಸ್ಟ್ 26ರವರೆಗೆ ಸಿಬಿಐ ವಶಕ್ಕೆ ನೀಡಿ ಸಿಬಿಐನ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.
ಐಎನ್ ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಭಾಗಿಯಾಗಿರುವುದು ಕನ್ಫರ್ಮ್ ಆಗುತ್ತಿದ್ದಂತೆ ಸಿಬಿಐ ಹಾಗೂ ಜಾರಿನಿರ್ದೇಶನಾಲಯದ ಅಧಿಕಾರಿಗಳು ಅವರ ಮನೆಗೆ ತೆರಳಿದ್ದರು. ಈ ವೇಳೆ ಅವರು ಮನೆಯಲ್ಲಿ ಇಲ್ಲದ ಕಾರಣ, ಎರಡು ಗಂಟೆಯಲ್ಲಿ ಸಿಬಿಐ ಎದುರು ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿತ್ತು.
ಇನ್ನು ನಿನ್ನೆ ರಾತ್ರಿ ನಾಟಕೀಯ ಬೆಳವಣಿಗೆಯಲ್ಲಿ ಅವರನ್ನ ಮನೆಯಿಂದ ಬಂಧನ ಮಾಡಿ ಇಂದು ಸಿಬಿಐ ವಿಶೇಷ ಕೋರ್ಟ್ಗೆ ಹಾಜರು ಮಾಡಲಾಗಿತ್ತು. ಈ ವೇಳೆ ಅನೇಕ ಪ್ರಶ್ನೆಗಳನ್ನ ಅವರಿಗೆ ಕೇಳಲಾಗಿದೆ.
ಗಂಭೀರ ಪ್ರಕರಣವಾಗಿರುವ ಕಾರಣ ಅವರನ್ನ ಮುಂದಿನ ಐದು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿತ್ತು. ವಾದ, ಪ್ರತಿವಾದ ಆಲಿಸಿರುವ ಸಿಬಿಐ ವಿಶೇಷ ಕೋರ್ಟ್ ಆಗಸ್ಟ್ 26ರವರೆಗೆ ಅವರನ್ನ ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಲಾಗಿದೆ. ಈ ವೇಳೆ ಚಿದಂಬರಂ ಕುಟುಂಬಸ್ಥರು, ಅವರ ಪರ ವಕೀಲರು ಭೇಟಿಯಾಗಿ ಪ್ರತಿದಿನ 30 ನಿಮಿಷಗಳ ಕಾಲ ಮಾತನಾಡಬಹುದು ಎಂದು ಹೇಳಿದೆ.
ಪಿ.ಚಿದಂಬರಂ ಕೇಂದ್ರ ವಿತ್ತ ಸಚಿವರಾಗಿದ್ದಾಗ, ಮೀಡಿಯಾ ಕುಳಗಳಾದ ಪೀಟರ್ ಮುಖರ್ಜಿಯಾ ಮತ್ತು ಇಂದ್ರಾಣಿ ಮುಖರ್ಜಿಯಾ ಒಡೆತನದಲ್ಲಿದ್ದ ಐಎನ್ಎಕ್ಸ್ ಮೀಡಿಯಾ ಮಲೇಷ್ಯಾದ ಕಂಪನಿಯಿಂದ 305 ಕೋಟಿ ರೂಪಾಯಿಗಳನ್ನು ಪಡೆದಿತ್ತು. ಆದರೆ, ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯಿಂದ 4.62 ಕೋಟಿ ರೂಪಾಯಿ ಹೂಡಿಕೆ ಮಾಡಲು ಮಾತ್ರ ಅನುಮತಿ ನೀಡಲಾಗಿತ್ತು. ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕಂದಾಯ ಸಚಿವಾಲಯ ವಿಚಾರಣೆಗೆ ಆದೇಶಿಸಿತ್ತು. ಆದರೆ, ಪಿ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರು ಮಧ್ಯಸ್ಥಿಕೆ ವಹಿಸಿ, ತಂದೆಯ ಪ್ರಭಾವವನ್ನು ಬಳಸಿಕೊಂಡು ವಿಚಾರಣೆಯನ್ನು ತಪ್ಪಿಸಲು ತಮ್ಮ ಕಂಪನಿಯ ಮೂಲಕ 10 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಕ್ಕಾಗಿ ಅವರು ಕೆಲ ಕಾಲ ಬಂಧನಕ್ಕೂ ಒಳಗಾಗಿದ್ದರು.