ಹೈದರಾಬಾದ್: ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಮತ್ತು ತಾಲಿಬಾನ್ ಮಧ್ಯೆ ನಡೆದ ದೋಹಾ ಒಪ್ಪಂದದ ನಂತರವೂ ಹಿಂಸಾಚಾರ ಈ ಭಾಗದಲ್ಲಿ ಅಂತ್ಯ ಕಂಡಿಲ್ಲ. ಬದಲಿಗೆ ಹಿಂಸಾಚಾರ ಹೆಚ್ಚೇ ಆಗಿದೆ. ಅಫ್ಘಾನಿಸ್ತಾನದಲ್ಲಿ ಈಗ ಅಗೋಚರ ಶತ್ರು ಮತ್ತು ನಾಗರಿಕರ ಮಧ್ಯೆ ಭೀಕರ ಸಂಘರ್ಷವೇ ನಡೆದಿದೆ. ಕಾಬೂಲ್ನಲ್ಲಿ ಇತ್ತೀಚೆಗೆ ನವಜಾತ ಶಿಶುಗಳ ಮಾರಣಹೋಮ ನಡೆದಿರುವುದರಿಂದ ಪರಿಸ್ಥಿತಿ ಸಂಪೂರ್ಣ ನಿಯಂತ್ರಣ ತಪ್ಪಿದೆ ಎಂಬುದು ಸಾಬೀತಾಗಿದೆ. ಇದರಿಂದ ಜನರಲ್ಲಿ ಭಾರಿ ಭೀತಿ ಉಂಟಾಗಿದೆ.
9/11 ದಾಳಿಯ ನಂತರದಲ್ಲಿ ಅಮೆರಿಕದ ಸೇನೆ ಈ ಪ್ರದೇಶಕ್ಕೆ ಕಾಲಿಟ್ಟಿತ್ತು. ತಾಲಿಬಾನ್ಗೆ ಒಂದು ಅಂತ್ಯ ಕಾಣಿಸಿ, ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವುದು ಈ ಸೇನೆಯ ಉದ್ದೇಶವಾಗಿತ್ತು. ತಾಲಿಬಾನ್ ಜೊತೆಗಿನ ಯುದ್ಧ ಬಹುತೇಕ ಅಂತ್ಯ ಕಂಡಂತಿದೆ. ಆದರೆ ಹಿಂಸಾಚಾರ ಈ ಪ್ರದೇಶದಲ್ಲಿ ಮುಗಿದಿಲ್ಲ.
ಎರಡು ದಶಕಗಳವರೆಗೆ ಯುದ್ಧ ನಡೆದ ನಂತರ ಅಮೆರಿಕ ಮತ್ತು ತಾಲಿಬಾನ್ ಮಧ್ಯೆ ನಡೆದ ಶಾಂತಿ ಒಪ್ಪಂದವನ್ನು ಕೆಲವು ವಿಶ್ಲೇಷಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇದನ್ನು ಯುದ್ಧ ಪೀಡಿತ ಅಫ್ಘಾನಿಸ್ತಾನದಿಂದ ಗೌರವಯುತ ನಿರ್ಗಮನ ಎಂದು ಅವರು ವಿಶ್ಲೇಷಿಸುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿನ “ಸುದೀರ್ಘ ಮತ್ತು ಕಠಿಣ ಪಯಣ” ಎಂದು ಇದನ್ನು ಒಪ್ಪಂದ ಮಾಡಿಕೊಂಡ ನಂತರ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. “ಇಷ್ಟು ವರ್ಷಗಳು ಕಳೆದ ನಂತರ ನಮ್ಮ ಜನರನ್ನು ವಾಪಸ್ ಕರೆಸಿಕೊಳ್ಳುವ ಸಮಯ ಇದು” ಎಂದು ಟ್ರಂಪ್ ಹೇಳಿದ್ದಾರೆ.
ಈ ವಲಯದಲ್ಲಿ ಭಾರತ ನಿರಂತರವಾಗಿ ನಿರ್ಲಿಪ್ತ ರಾಜಕೀಯ ನಿಲುವನ್ನು ಹೊಂದಿದೆ. ರಸ್ತೆಗಳ ನಿರ್ಮಾಣ, ಶಾಲೆಗಳ ನಿರ್ಮಾಣ ಮತ್ತು ಸಂಸತ್ ಕಟ್ಟಡದ ನಿರ್ಮಾಣಕ್ಕೆ ಭಾರತ ನೆರವಾಗಿದ್ದು, ಅಫ್ಘಾನಿಸ್ತಾನದ ಜನರ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ. ಆದರೆ ಅಮೆರಿಕದ ಜೊತೆ ತಾಲಿಬಾನ್ಅನ್ನು ಮಾತುಕತೆಗೆ ಕರೆತರುವಲ್ಲಿ ಪಾಕಿಸ್ತಾನದ ಪಾತ್ರವೂ ಪ್ರಮುಖವಾಗಿದೆ ಎಂದು ಬದಲಾಗುತ್ತಿರುವ ಸನ್ನಿವೇಶದಲ್ಲಿ ಭಾರತದ ಆಫ್ಘನ್ ನೀತಿಯ ಬಗ್ಗೆ ಬಿಲಾಲ್ ಭಟ್ ಜೊತೆ ಚರ್ಚಿಸಿದ ಪಾಲಿಸಿ ಸ್ಟಡೀಸ್ ಸೊಸೈಟಿಯ ನಿರ್ದೇಶಕ ಕಮಾಂಡರ್ (ನಿವೃತ್ತ) ಉದಯ ಭಾಸ್ಕರ್ ಹೇಳಿದ್ದಾರೆ.