ಆಂಧ್ರಪ್ರದೇಶ: ದಿಶಾ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಣಯಕ್ಕೆ ತೆಲಂಗಾಣ ಸರ್ಕಾರ ಹಾಗೂ ಪೊಲೀಸರನ್ನು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಹೊಗಳಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತ ವಿಚಾರಣೆ ಮತ್ತು ಕಠಿಣ ಶಿಕ್ಷೆಯನ್ನು ನೀಡುವ ಸಂಬಂಧ ನಮ್ಮ ಸರ್ಕಾರ ಹೊಸ ಮಸೂದೆಯನ್ನು ಪರಿಚಯಿಸಲಿದೆ ಎಂದರು.
ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿ, ದಿಶಾ ಪ್ರಕರಣ ನನ್ನನ್ನು ತೀವ್ರವಾಗಿ ನೋವಿಗೆ ಒಳಗಾಗುವಂತೆ ಮಾಡಿದೆ. ಇಂತಹ ಘಟನೆಗಳಿಗೆ ನಾನು ಹೇಗೆ ತಾನೆ ಪ್ರತಿಕ್ರಿಯಿಸಬೇಕು? ಯಾವ ರೀತಿಯ ಶಿಕ್ಷೆ ನೀಡಿದರೆ ತಾನೆ ಪೋಷಕರಿಗೆ ಸಮಾಧಾನ ಆಗುತ್ತದೆ? ಎಂದು ಜಗನ್ ಅಸೆಂಬ್ಲಿಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು, ಚಲನಚಿತ್ರದಲ್ಲಿನ ನಾಯಕ ಎನ್ಕೌಂಟರ್ನಲ್ಲಿ ಯಾರನ್ನಾದರೂ ಕೆಟ್ಟವರನ್ನು ಕೊಂದರೆ, ನಾವೆಲ್ಲರೂ ಚಪ್ಪಾಳೆ ತಟ್ಟಿ ಸಂತೋಷ ವ್ಯಕ್ತಪಡಿಸುತ್ತೇವೆ. ಅದೇ ರೀತಿ ನಿಜ ಜೀವನದಲ್ಲಿ ಹಾಗೆ ಮಾಡಿದರೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಹೆಸರಿನಲ್ಲಿ ದೆಹಲಿಯಿಂದ ಇಲ್ಲಿಗೆ ಬರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೆಲವು ದೇಶಗಳಲ್ಲಿ, ಅಂತಹ ಅಪರಾಧಗಳನ್ನು ಮಾಡುವವರಿಗೆ ತಕ್ಷಣವೇ ಗುಂಡು ಹಾರಿಸಲಾಗುತ್ತದೆ ಎಂದರು.
ಮಹಿಳೆಯರ ಮೇಲಿನ ಅಪರಾಧಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯನ್ನು ನೀಡಲು ಬಲವಾದ ಕಾನೂನನ್ನು ತರಬೇಕು. ಅಪರಾಧವಾದ ಮೂರು ವಾರಗಳಲ್ಲಿ ಶಿಕ್ಷೆಯನ್ನು ನೀಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.