ಅಮ್ರೋಹಾ (ಉತ್ತರ ಪ್ರದೇಶ): ಇಲ್ಲಿನ ದೋಂಖೇರಾ ಗ್ರಾಮದಲ್ಲಿ 17 ವರ್ಷದ ದಲಿತ ಯುವಕನನ್ನು ನಾಲ್ವರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ವಿಕಾಸ್ ಜಾಧವ್ (17) ತನ್ನ ಮನೆಯಲ್ಲಿ ಮಲಗಿದ್ದಾಗ ಲಾಲಾ ಚೌಹಾನ್, ಹೋರಾಮ್ ಚೌಹಾನ್, ಜಸ್ವೀರ್ ಮತ್ತು ಭೂಷಣ್ ಎಂಬ ನಾಲ್ವರು ತಡರಾತ್ರಿ ಬಂದು ಆತನ ಮೇಲೆ ಗುಂಡು ಹಾರಿಸಿದ್ದಾರೆ.
"ಗುಂಡಿನ ಶಬ್ದ ಕೇಳಿ ನಾವು ವಿಕಾಸ್ನನ್ನು ರಕ್ಷಿಸಲು ಧಾವಿಸಿದೆವು. ಆಗ ನಾಲ್ವರು ಓಡಿಹೋಗಿದ್ದರು. ವಿಕಾಸ್ ರಕ್ತದ ಮಡುವಿನಲ್ಲಿ ಬಿದ್ದಿದ್ದನು. ನಾವು ಆತನನ್ನು ಆಸ್ಪತ್ರೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಆತ ಸಾವನ್ನಪ್ಪಿದ್ದ" ಎಂದು ಮೃತ ವಿಕಾಸ್ ಜಾಧವ್ ತಂದೆ ಓಂ ಪ್ರಕಾಶ್ ಜಾಧವ್ ಹೇಳಿದ್ದಾರೆ.
"ವಿಕಾಸ್ ಮೇ 31ರಂದು ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಹೋದಾಗ ಗಲಾಟೆ ನಡೆದಿತ್ತು. ಆತ ದೇವಾಲಯ ಪ್ರವೇಶಿಸದಂತೆ ವಾದ ನಡೆದಿತ್ತು" ಎಂದು ಓಂ ಪ್ರಕಾಶ್ ಹೇಳಿದರು.
ಅದೇ ದಿನ ದೂರು ದಾಖಲಿಸಲಾಗಿದ್ದು, ಆ ಸಮಯದಲ್ಲಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದರು.
ನಾಲ್ವರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರನ್ನು ಕೂಡ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.