ತಿರುವನಂತಪುರಂ: ಕೇರಳದ ದಕ್ಷಿಣ ಭಾಗದಲ್ಲಿ ಇಂದು ರಾತ್ರಿ ಬುರೆವಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ತಿರುವನಂತಪುರಂ, ಕೊಲ್ಲಂ, ಪಥನಮತ್ತಟ್ಟ, ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ತೀವ್ರ ಮಳೆಯಾಗುವ ನಿರೀಕ್ಷೆಯಿದೆ.
ಐಎಂಡಿ ಪ್ರಕಾರ, ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಬುರೆವಿ ಚಂಡಮಾರುತ ಉದ್ಭವಗೊಂಡಿದ್ದು, ಇದು ನವೆಂಬರ್ 3 ರಂದು ತಮಿಳುನಾಡಿನ ದಕ್ಷಿಣ ಕರಾವಳಿಯನ್ನು ಅಪ್ಪಳಿಸುವ ನಿರೀಕ್ಷೆಯಿದೆ. ಚಂಡಮಾರುತದಿಂದ ತಿರುವನಂತಪುರಂ ಜಿಲ್ಲೆ ದೊಡ್ಡ ಅಪಾಯ ಉಂಟಾಗಬಹುದು ಎಂದು ಅಂದಾಜಿಸಲಾಗಿದ್ದು, ಈಗಾಗಲೇ ಪರಿಣಾಮವನ್ನು ಕಡಿಮೆ ಮಾಡಲು ತನ್ನ ಸಿದ್ಧತೆಗಳನ್ನು ಪ್ರಾರಂಭಿಸಿದೆ.
ತಿರುವನಂತಪುರಂ ಜಿಲ್ಲಾಧಿಕಾರಿ ನವಜಯೋತ್ ಖೋಸಾ ಮಾತನಾಡಿ, ಜಿಲ್ಲೆಯಲ್ಲಿ ಚಂಡಮಾರುತದ ಸಂದರ್ಭದಲ್ಲಿ ಯಾವುದೇ ತುರ್ತು ಪರಿಸ್ಥಿತಿ ನಿಭಾಯಿಸಲು ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ ಮತ್ತು ಸೇನೆ, ನೌಕಾಪಡೆ ಮತ್ತು ವಾಯುಪಡೆ ಸೇರಿದಂತೆ ಕೇಂದ್ರ ಪಡೆಗಳ ನೆರವು ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೇರಳ - ತಮಿಳುನಾಡಿಗೆ 'ಬುರೆವಿ' ಚಂಡಮಾರುತ ಭೀತಿ: ಭಾರೀ ಮಳೆ ಮುನ್ಸೂಚನೆ
ಬುರೆವಿ ಚಂಡಮಾರುತ ತಿರುವನಂತಪುರಂಗೆ ನಾಳೆ ಅಪ್ಪಳಿಸಬಹುದು. ನಾವು ಮೀನುಗಾರರನ್ನು ಸಮುದ್ರಕ್ಕೆ ಇಳಿಯದಂತೆ ಮನವಿ ಮಾಡಿದ್ದೇವೆ. ಗುಡ್ಡಗಾಡು ಪ್ರದೇಶಗಳಲ್ಲಿ ಮೀನುಗಾರಿಕೆ ಮತ್ತು ನಿಯಂತ್ರಿತ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದ್ದೇವೆ. 75 - 80 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದ್ದು, ಅಧಿಕ ಮಳೆಯ ನಿರೀಕ್ಷೆಯಲ್ಲಿದ್ದೇವೆ ಎಂದು ತಿರುವನಂತಪುರಂ ಜಿಲ್ಲಾಧಿಕಾರಿ ನವಜಯೋತ್ ಖೋಸಾ ಹೇಳಿದ್ದಾರೆ.